Home ತಾಜಾ ಸುದ್ದಿ Uppinangady : ಕಾರಿಗೆ ಗ್ಯಾಸ್ ಲಾರಿ ಭೀಕರ ಡಿಕ್ಕಿ; ಕಾರ್ಕಳದ ಒಂದೇ ಕುಟುಂಬದ ಐವರು ಗಂಭೀರ!

    Uppinangady : ಕಾರಿಗೆ ಗ್ಯಾಸ್ ಲಾರಿ ಭೀಕರ ಡಿಕ್ಕಿ; ಕಾರ್ಕಳದ ಒಂದೇ ಕುಟುಂಬದ ಐವರು ಗಂಭೀರ!

    0
    26
    Uppinangady: Gas lorry collides with car; Five members of the same family from Karkala are in serious condition!

    ಉಪ್ಪಿನಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಕೂಟೇಲು ಎಂಬಲ್ಲಿ ಸೋಮವಾರ ತಡರಾತ್ರಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಕ್ರೆ ನಿವಾಸಿಯಾಗಿರುವ ಒಂದೇ ಕುಟುಂಬದ ಸದಸ್ಯರು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ವ್ಯಾಗನಾರ್ ಕಾರಿನಲ್ಲಿ ಯಾತ್ರೆ ಕೈಗೊಂಡಿದ್ದರು. ಯಾತ್ರೆ ಮುಗಿಸಿ ಕಾರು ಕೂಟೇಲು ಸಮೀಪ ಸಂಚರಿಸುತ್ತಿದ್ದಾಗ ಎದುರಿನಿಂದ ಬಂದ ಅಡುಗೆ ಅನಿಲದ ಜಾಡಿಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವ್ಯಾಗನಾರ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

    ಈ ಭೀಕರ ದುರಂತದಲ್ಲಿ ಕಾರಿನಲ್ಲಿದ್ದ ಚಾಲಕ ದೀಪಕ್ (45), ಯಾತ್ರಾರ್ಥಿಗಳಾದ ಗುರುರಾಜ್ (46), ಧನುಷ್ (15), ಭಾರತಿ (48) ಮತ್ತು ಗೀತಾ (55) ಎಂಬುವವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳ ದೇಹದ ಹಲವು ಭಾಗಗಳಿಗೆ ಬಲವಾದ ಪೆಟ್ಟು ಬಿದ್ದಿದ್ದು, ಎಲ್ಲರನ್ನೂ ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಐವರ ಸ್ಥಿತಿಯೂ ಅತ್ಯಂತ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಇನ್ನು ಲಾರಿ ಚಾಲಕ ದಾಮೋದರ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾನೆ.

    ಅಪಘಾತ ನಡೆದ ತಕ್ಷಣ ಸ್ಥಳದಲ್ಲಿ ಭಾರಿ ಕೂಗಾಟ, ಚೀರಾಟ ಕೇಳಿಬಂದಿದೆ. ಕಾರಿನ ಅವಶೇಷಗಳ ನಡುವೆ ಸಿಲುಕಿ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಗಾಯಾಳುಗಳನ್ನು ಹೊರಗೆಳೆಯಲು ಸ್ಥಳೀಯರಾದ ಯು ಟಿ ಫಾಯಾರೂಝ್, ವಿದ್ಯಾಧರ ಜೈನ್, ರುಕಾರಿಯಾ ಹಾಗೂ ಇತರರು ತಕ್ಷಣವೇ ಧಾವಿಸಿದ್ದಾರೆ. ನಜ್ಜುಗುಜ್ಜಾದ ಕಾರನ್ನು ಕತ್ತರಿಸಿ ಗಾಯಾಳುಗಳನ್ನು ಅತ್ಯಂತ ಶ್ರಮವಹಿಸಿ ಹೊರತೆಗೆದ ಇವರು ಆಸ್ಪತ್ರೆಗೆ ಸಾಗಿಸುವಲ್ಲಿ ಮಾನವೀಯತೆ ಮೆರೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

    LEAVE A REPLY

    Please enter your comment!
    Please enter your name here

    error: Content is protected !!