ನವದೆಹಲಿ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಬಳಸಿರುವ “ಅಸಭ್ಯ” ಮತ್ತು “ಅವಮಾನಕರ” ಭಾಷೆಯು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ. ಖರ್ಗೆ ಅವರು ವಯಸ್ಸಾದ ಕಾರಣ “ಹುಚ್ಚನಂತೆ ಮಾತನಾಡುತ್ತಿದ್ದಾರೆ” ಎಂಬ ಶರ್ಮಾ ಅವರ ಹೇಳಿಕೆಯು ಕೇವಲ ಒಬ್ಬ ವ್ಯಕ್ತಿಗೆ ಮಾಡಿದ ಅವಮಾನವಲ್ಲ, ಬದಲಾಗಿ ದೇಶದ ಕೋಟ್ಯಂತರ ದಲಿತರು ಮತ್ತು ಶೋಷಿತ ವರ್ಗದವರಿಗೆ ಮಾಡಿದ ಅವಮಾನ ಎಂದು ಅವರು ಹೇಳಿದ್ದಾರೆ.
ಈ ಕುರಿತು ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ, “ಹಿಮಂತ ಬಿಸ್ವ ಶರ್ಮಾ ಅವರ ಈ ಅವಮಾನಕರ ನಿಲುವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನುಮೋದಿಸುತ್ತಾರೆಯೇ ಎಂಬುದನ್ನು ದೇಶಕ್ಕೆ ಸ್ಪಷ್ಟಪಡಿಸಬೇಕು” ಎಂದು ಒತ್ತಾಯಿಸಿದ್ದಾರೆ. ಇತ್ತ ರಾಹುಲ್ ಗಾಂಧಿ ಕೂಡ ಪ್ರತಿಕ್ರಿಯಿಸಿದ್ದು, “ಹಿಮಂತ ಶರ್ಮಾ ಅವರ ಇಂತಹ ಭಾಷೆಯ ಬಳಕೆಯ ಬಗ್ಗೆ ಪ್ರಧಾನಿಗಳ ಮೌನವು ಅವರ ಅಸಹಾಯಕತೆಯಲ್ಲ, ಬದಲಾಗಿ ಅವರ ಸಮ್ಮತಿಯಾಗಿದೆ” ಎಂದು ಗುಡುಗಿದ್ದಾರೆ.
ವಿವಾದದ ಹಿನ್ನೆಲೆ: ಅಸ್ಸಾಂ ಮುಖ್ಯಮಂತ್ರಿಗಳ ವಿರುದ್ಧದ ಆರೋಪಗಳ ತನಿಖೆಯನ್ನು ಕೇಂದ್ರ ಏಜೆನ್ಸಿಗಳಿಗೆ ವಹಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಶರ್ಮಾ ಅವರು ಖರ್ಗೆ ಅವರ ವಿರುದ್ಧ ವೈಯಕ್ತಿಕವಾಗಿ ಹರಿಹಾಯ್ದಿದ್ದರು. ಇದು ಬಿಜೆಪಿಯ “ದಲಿತ ವಿರೋಧಿ ಮನಸ್ಥಿತಿ”ಯನ್ನು ಪ್ರತಿಬಿಂಬಿಸುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.

