ನವದೆಹಲಿ: ಜಾಗತಿಕ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಹೊರ್ಮುಜ್ ಜಲಸಂಧಿಯನ್ನು (Strait of Hormuz) ಮುಕ್ತಗೊಳಿಸಿರುವುದು ಭಾರತದ ಪಾಲಿಗೆ ದೊಡ್ಡ ಆಶಾದಾಯಕ ಸುದ್ದಿಯಾಗಿದೆ. ಇದರಿಂದ ತೈಲ ಕಂಪನಿಗಳು, ರಸಗೊಬ್ಬರ ಉತ್ಪಾದಕರು ಮತ್ತು ರಫ್ತುದಾರರಲ್ಲಿ ಹೊಸ ಸಂಚಲನ ಮೂಡಿದೆ. ಫೆಬ್ರವರಿ 28 ರಂದು ಇರಾನ್ ವಿರುದ್ಧ ಯುದ್ಧ ಆರಂಭವಾದಾಗಿನಿಂದ ಈ ಮಾರ್ಗದಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು.
ಭಾರತದ 15 ಹಡಗುಗಳು ಸೇರಿ 41 ಹಡಗುಗಳು ಸಂಚಾರಕ್ಕೆ ಸಿದ್ಧ: ಜಲಸಂಧಿ ದಾಟಲು ಕಾಯುತ್ತಿದ್ದ ಒಟ್ಟು 41 ಹಡಗುಗಳ ಪೈಕಿ 15 ಭಾರತೀಯ ಹಡಗುಗಳಾಗಿವೆ. ಇದರಲ್ಲಿ 10 ಕಚ್ಚಾ ತೈಲದ ಹಡಗುಗಳು, ನಾಲ್ಕು ಎಲ್ಪಿಜಿ ಟ್ಯಾಂಕರ್ಗಳು ಮತ್ತು ಮೂರು ಎಲ್ಎನ್ಜಿ ಒಯ್ಯುವ ಹಡಗುಗಳು ಸೇರಿವೆ. ವಿಶೇಷವಾಗಿ ಮುಂಗಾರು ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರವನ್ನು ಹೊತ್ತಿರುವ 12ಕ್ಕೂ ಹೆಚ್ಚು ಹಡಗುಗಳು ಇದೀಗ ಭಾರತದತ್ತ ಮುಖ ಮಾಡಿವೆ. ಇದು ದೇಶದ ಕೃಷಿ ಕ್ಷೇತ್ರಕ್ಕೆ ದೊಡ್ಡ ವರದಾನವಾಗಲಿದೆ.
ಬ್ಯಾರೆಲ್ಗೆ 90 ಡಾಲರ್ ಗಿಂತ ಕೆಳಗಿಳಿದ ತೈಲ ಬೆಲೆ: ಜಲಸಂಧಿ ಮುಕ್ತವಾದ ಘೋಷಣೆ ಹೊರಬೀಳುತ್ತಿದ್ದಂತೆಯೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಶೇ. 11.5 ರಷ್ಟು ಕುಸಿತ ಕಂಡಿದೆ. ಬ್ರೆಂಟ್ ಫ್ಯೂಚರ್ಸ್ ಬೆಲೆ ಪ್ರತಿ ಬ್ಯಾರೆಲ್ಗೆ 87.9 ಡಾಲರ್ಗೆ ಇಳಿಕೆಯಾಗಿದೆ. ಇದರಿಂದ ಸಾಗಾಣಿಕೆ ವೆಚ್ಚ (Shipping cost) ಗಣನೀಯವಾಗಿ ಕಡಿಮೆಯಾಗಲಿದ್ದು, ಎಲ್ಲಾ ವಲಯಗಳಿಗೂ ಲಾಭವಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಿಂಗಾಪುರ ಮೂಲದ ಶಿಪ್ಪಿಂಗ್ ಕಂಪನಿ ಎಕ್ಸಿಮ್ವಾಲಾ ಸೊಲ್ಯೂಶನ್ಸ್ ನಿರ್ದೇಶಕ ಡೇವ್ ಗರ್ಗ್ ಮಾತನಾಡಿ, “ತೈಲ ಬೆಲೆ ಇಳಿಕೆಯಾಗಿರುವುದರ ಪರಿಣಾಮ ಅಂತರರಾಷ್ಟ್ರೀಯ ಸಾಗಾಣಿಕೆ ದರವೂ ಇಳಿಯುತ್ತದೆ. ಇದು ಎಲ್ಲ ವಲಯಗಳಿಗೆ ದೊಡ್ಡ ಲಾಭ ನೀಡಲಿದೆ,” ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ. ತೈಲ ಬೆಲೆ ಕುಸಿತದಿಂದ ಹಡಗುಗಳ ಇಂಧನ ವೆಚ್ಚ ತಗ್ಗುವುದರಿಂದ ಗ್ರಾಹಕರಿಗೆ ಅಗ್ಗದ ದರದಲ್ಲಿ ಸರಕುಗಳು ಲಭ್ಯವಾಗಲಿವೆ ಎಂಬುದು ಅವರ ಅಭಿಪ್ರಾಯ.
“ಸ್ಥಗಿತಗೊಂಡಿದ್ದ ರಫ್ತು ಮತ್ತೆ ಆರಂಭ” – ಡ್ಯಾನಿಶ್ ಶಾ: ಪುಣೆ ಮೂಲದ ಸಂಗ್ಹಾರ್ ಎಕ್ಸ್ಪೋರ್ಟ್ಸ್ ಮಾಲೀಕ ಡ್ಯಾನಿಶ್ ಶಾ ಅವರು ರಫ್ತುದಾರರ ಸಂಕಷ್ಟವನ್ನು ವಿವರಿಸುತ್ತಾ, “ತೈಲ ಬೆಲೆ ಏರಿಕೆ ಹಾಗೂ ಸಾಗಾಣಿಕೆ ವೆಚ್ಚ ಹೆಚ್ಚಳದಿಂದ ಪಶ್ಚಿಮ ಏಷ್ಯಾಗೆ ಈರುಳ್ಳಿ ರಫ್ತು ಬಹುತೇಕ ನಿಂತು ಹೋಗಿತ್ತು,” ಎಂದು ಹೇಳಿದ್ದಾರೆ. ಈಗ ಜಲಸಂಧಿ ಮುಕ್ತವಾಗಿ ಸಾಗಾಣಿಕೆ ದರ ಇಳಿಕೆಯಾಗುತ್ತಿರುವುದರಿಂದ ಮತ್ತೆ ರಫ್ತು ವಹಿವಾಟು ಚುರುಕುಗೊಳ್ಳುವ ಮುನ್ಸೂಚನೆ ಸಿಕ್ಕಿದೆ.

