ಬೆಂಗಳೂರು (ಏ.18): ಬಾಲ್ಯದಿಂದಲೇ ಜೊತೆಯಾಗಿ ಬೆಳೆದಿದ್ದ ಸ್ನೇಹಿತರ ನಡುವೆ ಮದ್ಯಪಾನದ ಅಮಲಿನಲ್ಲಿ ಶುರುವಾದ ಸಣ್ಣ ಜಗಳವೊಂದು ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ಆನೇಕಲ್ ತಾಲ್ಲೂಕಿನ ಮಟ್ಟನಹಳ್ಳಿ ಬಳಿ ತಮಿಳುನಾಡಿನ ಸಿಂಗಸಾದನಪಳ್ಳಿ ಮೂಲದ ಮೋಹನ್ ಎಂಬ ಯುವಕನನ್ನು ಆತನ ಬಾಲ್ಯದ ಗೆಳೆಯ ಮನೋಜ್ ಎಂಬಾತನೇ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಶನಿವಾರ ಸಂಜೆ ಈ ಕೃತ್ಯ ನಡೆದಿದೆ.
ಘಟನೆಯ ವಿವರದಂತೆ, ಮೋಹನ್ ಮತ್ತು ಮನೋಜ್ ಮತ್ತೊಬ್ಬ ಸ್ನೇಹಿತ ಮಧು ಜೊತೆಗೂಡಿ ಮದ್ಯಪಾನ ಮಾಡಲು ನಿರ್ಜನ ಪ್ರದೇಶಕ್ಕೆ ತೆರಳಿದ್ದರು. ಪಾರ್ಟಿ ಜೋರಾಗಿದ್ದ ವೇಳೆ, ಎಲ್ಲರೂ ಪೂರ್ಣ ನಶೆಯಲ್ಲಿದ್ದಾಗ ಸುಮಾರು ಎರಡು ವರ್ಷಗಳ ಹಿಂದೆ ನಡೆದಿದ್ದ ಸಣ್ಣ ವಿಷಯವೊಂದರ ಬಗ್ಗೆ ವಾಗ್ವಾದ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ತೀವ್ರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ವೇಳೆ ಕ್ಷಣಿಕ ಕೋಪಕ್ಕೆ ಒಳಗಾದ ಮನೋಜ್, ಅಲ್ಲೇ ಬಿದ್ದಿದ್ದ ದೊಡ್ಡ ಕಲ್ಲನ್ನು ಎತ್ತಿ ಮೋಹನ್ ತಲೆಯ ಮೇಲೆ ಬಲವಾಗಿ ಜಜ್ಜಿದ್ದಾನೆ.
ತಲೆಗೆ ಗಂಭೀರ ಗಾಯವಾದ ಮೋಹನ್ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಅಲ್ಲಿಂದ ಆರೋಪಿಗಳು ಪರಾರಿಯಾಗಿದ್ದು, ರಕ್ತಸಿಕ್ತ ಕಲ್ಲು ಮತ್ತು ಶವವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಸರ್ಜಾಪುರ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಗಳು ಮೊದಲು ಮೋಹನ್ನನ್ನು ಊಟಕ್ಕೆಂದು ಕರೆದೊಯ್ದು ನಂತರ ಬಾರ್ನಲ್ಲಿ ಮದ್ಯ ಖರೀದಿಸಿ ಕೊಲೆ ಮಾಡಿದ ಸ್ಥಳಕ್ಕೆ ಕರೆತಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮೃತ ಮೋಹನ್ ಇತ್ತೀಚೆಗಷ್ಟೇ ಹೊಸ ಬೈಕ್ ಖರೀದಿಸಿ ಸಂತಸದಲ್ಲಿದ್ದನು, ಆದರೆ ಗೆಳೆಯನ ಅಟ್ಟಹಾಸಕ್ಕೆ ಆತ ಬಲಿಯಾಗಿರುವುದು ಕುಟುಂಬದವರ ಆಕ್ರಂದನಕ್ಕೆ ಕಾರಣವಾಗಿದೆ. ಕ್ಷಣಿಕ ಕೋಪ ಮತ್ತು ಮದ್ಯದ ಅಮಲು ಎಷ್ಟು ಭೀಕರ ಪರಿಣಾಮ ಬೀರಬಹುದು ಎಂಬುದಕ್ಕೆ ಈ ಘಟನೆ ಕನ್ನಡಿಯಾಗಿದೆ. ಸದ್ಯ ಪೊಲೀಸರು ಮುಖ್ಯ ಆರೋಪಿ ಮನೋಜ್ನನ್ನು ಬಂಧಿಸಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.

