ಫಿರೋಜಾಬಾದ್ (ಯುಪಿ): ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಮಹಿಳಾ ತಹಶೀಲ್ದಾರ್ ಒಬ್ಬರು ಜಿಲ್ಲಾಧಿಕಾರಿ (DM) ವಿರುದ್ಧ ಕಿರುಕುಳ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಮಾಡಿರುವುದು ಆಡಳಿತ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ತುಂಡ್ಲಾದಲ್ಲಿ ನಿಯೋಜನೆಗೊಂಡಿರುವ ತಹಶೀಲ್ದಾರ್ ರಾಖಿ ಶರ್ಮಾ, ಜಿಲ್ಲಾಧಿಕಾರಿ ರಮೇಶ್ ರಂಜನ್ ವಿರುದ್ಧ ಈ ಆರೋಪಗಳನ್ನು ಮಾಡಿದ್ದಾರೆ.
ತನಿಖಾ ವರದಿ ಬದಲಿಸಲು ಒತ್ತಡ: ಸುದ್ದಿಗಾರರೊಂದಿಗೆ ಮಾತನಾಡಿದ ರಾಖಿ ಶರ್ಮಾ, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ತಮಗೆ ಬೇಕಾದಂತೆ ಬದಲಿಸುವಂತೆ ಡಿಎಂ, ಅವರ ವಿಶೇಷ ಕರ್ತವ್ಯಾಧಿಕಾರಿ (OSD) ಮತ್ತು ಇತರ ಸಿಬ್ಬಂದಿ ಒತ್ತಡ ಹೇರಿದ್ದರು ಎಂದು ಆರೋಪಿಸಿದ್ದಾರೆ. “ಅವರ ಮಾತಿಗೆ ಒಪ್ಪದಿದ್ದಾಗ ಕಳೆದ ಒಂಬತ್ತು ತಿಂಗಳಿನಿಂದ ನನಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ. ಯಾವುದೇ ಕಾರಣವಿಲ್ಲದೆ ನನ್ನ ಸಂಬಳವನ್ನು ತಡೆಹಿಡಿಯಲಾಗಿತ್ತು ಮತ್ತು ನನ್ನ ಸೇವಾ ದಾಖಲೆಯಲ್ಲಿ ಪ್ರತಿಕೂಲ ಎಂಟ್ರಿಗಳನ್ನು ಮಾಡಲಾಗಿದೆ,” ಎಂದು ಅವರು ಆಳಲು ತೋಡಿಕೊಂಡಿದ್ದಾರೆ.
ಐಫೋನ್ ಲಂಚದ ಆರೋಪ: ಮತ್ತೊಂದು ಸ್ಫೋಟಕ ಆರೋಪ ಮಾಡಿರುವ ತಹಶೀಲ್ದಾರ್, ಡಿಎಂ ಅವರ ಓಎಸ್ಡಿ ನನ್ನ ಬಳಿ ‘ಐಫೋನ್’ ಬೇಡಿಕೆ ಇಟ್ಟಿದ್ದರು. ನಾನು ನೀಡಿದ ಐಫೋನ್ ಅನ್ನು ಪ್ರಸ್ತುತ ಜಿಲ್ಲಾಧಿಕಾರಿಗಳೇ ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ. ನಂತರ ನ್ಯಾಯಾಲಯದ ಆದೇಶದ ಮೇರೆಗೆ ತನ್ನ ಸಂಬಳ ಬಿಡುಗಡೆಯಾದರೂ, ಕಿರುಕುಳ ಮಾತ್ರ ನಿಂತಿಲ್ಲ ಎಂದು ಅವರು ದೂರಿದ್ದಾರೆ.
ಸಿಎಂ ಯೋಗಿ ಮೊರೆ ಹೋದ ತಹಶೀಲ್ದಾರ್: ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ಜಿಲ್ಲಾಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಖಿ ಶರ್ಮಾ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹಸ್ತಕ್ಷೇಪಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ, ಸ್ಥಳೀಯ ಸುದ್ದಿ ವಾಹಿನಿಯ ವರದಿಗಾರನೊಬ್ಬ ತಮಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿ ತುಂಡ್ಲಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಈ ಎಲ್ಲಾ ಆರೋಪಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಿಂದ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.

