ಮುಂಬೈ (ಏ.18): ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ಸಮೃದ್ಧಿ ಎಕ್ಸ್ಪ್ರೆಸ್ವೇನಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ, ಜೈಲು ಸೇರಿರುವ ವಿವಾದಿತ ಜ್ಯೋತಿಷಿ ಹಾಗೂ ‘ಬಾಬಾ’ ಅಶೋಕ್ ಖಾರತ್ನ ಆಪ್ತ ಸಹಚರ ಮತ್ತು ಆತನ ಪತ್ನಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಅವರ ಪುತ್ರ ಗಂಭೀರವಾಗಿ ಗಾಯಗೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ನಿಂತಿದ್ದ ಟ್ರಕ್ಗೆ ಡಿಕ್ಕಿ ಹೊಡೆದ ಕಾರು: ಮೃತರನ್ನು ಜಿತೇಂದ್ರ ಶೆಲ್ಕೆ (55) ಮತ್ತು ಅವರ ಪತ್ನಿ ಅನುರಾಧಾ (50) ಎಂದು ಗುರುತಿಸಲಾಗಿದೆ. ಈ ಕುಟುಂಬವು ಛತ್ರಪತಿ ಸಂಭಾಜಿನಗರದಿಂದ ಥಾಣೆಗೆ ಪ್ರಯಾಣಿಸುತ್ತಿತ್ತು. ಮುಂಬೈ-ನಾಗ್ಪುರ ಸಮೃದ್ಧಿ ಎಕ್ಸ್ಪ್ರೆಸ್ವೇಯ ಕೋಪರ್ಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಧೋತ್ರೆ ಗ್ರಾಮದ ಬಳಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಕಂಟೇನರ್ ಟ್ರಕ್ಗೆ ಅತಿ ವೇಗವಾಗಿ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ದೊಂಗಿ ಬಾಬಾನ ಆಪ್ತ ಈ ಜಿತೇಂದ್ರ: ಮೃತ ಜಿತೇಂದ್ರ ಶೆಲ್ಕೆ ಅವರು ನಾಸಿಕ್ ಮೂಲದ ಸ್ವಯಂಘೋಷಿತ ಜ್ಯೋತಿಷಿ ಅಶೋಕ್ ಖಾರತ್ನ ಅತ್ಯಂತ ಆಪ್ತ ಮತ್ತು ಆತನ ವ್ಯವಹಾರಿಕ ಪಾಲುದಾರರಾಗಿದ್ದರು. ಅಶೋಕ್ ಖಾರತ್ ಸದ್ಯ ಅತ್ಯಾಚಾರ ಮತ್ತು ವಂಚನೆಯಂತಹ ಗಂಭೀರ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಖಾರತ್ನ ಅನೇಕ ಆರ್ಥಿಕ ವ್ಯವಹಾರಗಳನ್ನು ಶೆಲ್ಕೆ ಅವರೇ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಪೊಲೀಸ್ ತನಿಖೆ: ಅತಿ ವೇಗ ಅಥವಾ ಚಾಲಕನ ನಿದ್ರೆಯ ಮಂಪರು ಈ ಅಪಘಾತಕ್ಕೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೋಪರ್ಗಾಂವ್ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

