ಬೆಂಗಳೂರು : ಪ್ರೀತಿಸಿದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಗರ್ಭಿಣಿ ಮಾಡಿದ ಗಂಭೀರ ಆರೋಪವೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ಅವರ ಮೇಲೆ ಕೇಳಿಬಂದಿದೆ. ಈ ಕುರಿತು ದಾಖಲಾಗಿರುವ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಆರೋಪಿ ಕೃಷ್ಣ ಜೆ. ರಾವ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈಗ ಮಹತ್ವದ ಮಧ್ಯಂತರ ಆದೇಶವನ್ನು ನೀಡಿದೆ.
ಈ ಪ್ರಕರಣದ ಮುಂದಿನ ಪ್ರಕ್ರಿಯೆಗಳಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದರೂ, ಅದನ್ನು ಕಟ್ಟುನಿಟ್ಟಾದ ಆರ್ಥಿಕ ಷರತ್ತಿಗೆ ಒಳಪಡಿಸಿದೆ. ಅರ್ಜಿದಾರ ಆರೋಪಿಯು ಸಂತ್ರಸ್ತೆ ಹಾಗೂ ಆಕೆಯ ಮಗುವಿನ ಜೀವನ ನಿರ್ವಹಣೆ ಮತ್ತು ಅಗತ್ಯತೆಗಳನ್ನು ಪೂರೈಸಲು ಪ್ರತಿ ತಿಂಗಳು 75 ಸಾವಿರ ರೂಪಾಯಿಗಳನ್ನು ಪಾವತಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಒಂದು ವೇಳೆ ಈ ಹಣವನ್ನು ಪಾವತಿಸದಿದ್ದರೆ ಪ್ರಕರಣದ ವಿಚಾರಣೆಗೆ ನೀಡಿರುವ ತಡೆಯಾಜ್ಞೆ ಮುಂದುವರಿಯುವುದಿಲ್ಲ ಎಂಬ ಸುಳಿವನ್ನು ನ್ಯಾಯಾಲಯ ನೀಡಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಆದೇಶವನ್ನು ಹೊರಡಿಸಿದೆ. ಅರ್ಜಿದಾರರು ಮುಂದಿನ ಒಂದು ವಾರದ ಒಳಗಾಗಿ ಸಂತ್ರಸ್ತೆಗೆ ಮೊದಲ 75 ಸಾವಿರ ರೂಪಾಯಿಗಳನ್ನು ಪಾವತಿಸಬೇಕು ಮತ್ತು ಆನಂತರ ಪ್ರತಿ ತಿಂಗಳು ಇದೇ ಮೊತ್ತದ ಹಣವನ್ನು ನೀಡುತ್ತಿರಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಈ ಹಣವನ್ನು ಆರೋಪಿಯು ಸ್ವತಃ ಅಥವಾ ತನ್ನ ಪೋಷಕರ ಮೂಲಕ ತಲುಪಿಸಬೇಕಿದೆ.

