ಉಪ್ಪಿನಂಗಡಿ, ಏಪ್ರಿಲ್ 25 : ನಿಯಂತ್ರಣ ತಪ್ಪಿ ಬೈಕ್ ಮಗುಚಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಜೀವನ ಮರಣ ಹೋರಾಟ ನಡೆಸುತ್ತಿದ್ದ ಹಿರೇಬಂಡಾಡಿ ನಿವಾಸಿ ಲಿಖಿತ್ ರೈ (18) ಅವರು ಚಿಕಿತ್ಸೆ ಫಲಿಸದೆ ಏಪ್ರಿಲ್ 25ರ ನಸುಕಿನ ಜಾವ ಮೃತಪಟ್ಟಿದ್ದಾರೆ.
ಏಪ್ರಿಲ್ 22ರಂದು ಸಂಜೆ ಲಿಖಿತ್ ರೈ ಸಂಚರಿಸುತ್ತಿದ್ದ ಬೈಕ್ ಕೊಯಿಲ-ಹಿರೇಬಂಡಾಡಿ ರಸ್ತೆಯ ಶಾಖೆಪುರ ಎಂಬಲ್ಲಿ ರಸ್ತೆ ಪಕ್ಕದ ಗುಂಡಿಗೆ ಮಗುಚಿ ಬಿದ್ದಿತ್ತು. ತಲೆಗೆ ಗಂಭೀರ ಗಾಯಗೊಂಡಿದ್ದ ಅವರನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋಮಾ ಸ್ಥಿತಿಯಲ್ಲಿದ್ದ ಲಿಖಿತ್ ರೈ ಅವರನ್ನು ಏಪ್ರಿಲ್ 24ರಂದು ಸಂಜೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿತ್ತು. ಆದರೆ, ಅಂತಿಮವಾಗಿ ವಿಧಿಬರಹಕ್ಕೆ ಸೋತು ಅವರು ಇಂದು ಮೃತಪಟ್ಟಿದ್ದಾರೆ.
ಮೃತ ಲಿಖಿತ್ ರೈ ಇತ್ತೀಚೆಗಷ್ಟೇ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿ ಕಾಲೇಜು ಸೇರುವ ತಯಾರಿಯಲ್ಲಿದ್ದರು. ಮೃತರ ತಂದೆ ರವೀಂದ್ರ ರೈ ಅವರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಹಿರೇಬಂಡಾಡಿ ಘಟಕದ ಅಧ್ಯಕ್ಷರಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಲಿಖಿತ್ ಅವರಿಗೆ ಅಪಘಾತವಾದ ಸುದ್ದಿ ತಿಳಿಯುತ್ತಿದ್ದಂತೆಯೇ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಹಾಗೂ ಟ್ರಸ್ಟ್ನ ಸದಸ್ಯರು ನೆರವಿಗೆ ಧಾವಿಸಿದ್ದು, ಕುಟುಂಬಕ್ಕೆ ಸಾಂತ್ವನ ನೀಡಿದ್ದಾರೆ. ಯುವಕನ ಸಾವಿನಿಂದ ಹಿರೇಬಂಡಾಡಿ ಪರಿಸರದಲ್ಲಿ ಶೋಕ ಮನೆ ಮಾಡಿದೆ.

