ಬಂಟ್ವಾಳ, ಏಪ್ರಿಲ್ 25 : ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಬಾಲಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ನೇರಳಕಟ್ಟೆ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಿರುವ ಶರೀಫ್ ಎಂಬವರ ಪುತ್ರ ಶಹೀರ್ (15) ಮೃತಪಟ್ಟ ದೌರ್ಭಾಗ್ಯಶಾಲಿ ಬಾಲಕ.
ಪುತ್ತೂರು ಮೌಂಟೇನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿಯಾಗಿದ್ದ ಶಹೀರ್, ಶಾಲೆಗೆ ರಜೆ ಇರುವ ಹಿನ್ನೆಲೆಯಲ್ಲಿ ಗಡಿಯಾರದಲ್ಲಿರುವ ತನ್ನ ಅಜ್ಜಿಯ ಮನೆಗೆ ಭೇಟಿ ನೀಡಿದ್ದನು. ಶನಿವಾರ ಬೆಳಿಗ್ಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಶಹೀರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ಶಹೀರ್ ತಂದೆ, ತಾಯಿ, ಒಬ್ಬ ತಮ್ಮ ಹಾಗೂ ಇಬ್ಬರು ಸಹೋದರಿಯರನ್ನು ಒಳಗೊಂಡ ಬೃಹತ್ ಕುಟುಂಬವನ್ನು ಅಗಲಿದ್ದಾನೆ. ಈ ಘಟನೆಯಿಂದ ಗಡಿಯಾರ ಮತ್ತು ನೇರಳಕಟ್ಟೆ ಪರಿಸರದಲ್ಲಿ ತೀವ್ರ ಶೋಕ ಆವರಿಸಿದೆ.

