ಮುಂಬೈ : ಕಾಶ್ಮೀರದ ಪೆಹಲ್ಗಾಂನಲ್ಲಿ ಉಗ್ರರು ಧರ್ಮ ಕೇಳಿ ನಡೆಸಿದ್ದ ನರಮೇಧದ ಘಟನೆಯನ್ನೇ ಹೋಲುವಂತಹ ದಾಳಿ ಈಗ ಮುಂಬೈನಲ್ಲಿ ನಡೆದಿದೆ. ಮೀರಾ ರೋಡ್ನ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ರಾಜ್ಕುಮಾರ್ ಮಿಶ್ರಾ ಹಾಗೂ ಸುಬ್ರತೋ ಸೆನ್ ಎಂಬವರ ಮೇಲೆ ಝೈಬ್ ಝುಬೇರ್ ಅನ್ಸಾರಿ (31) ಎಂಬಾತ ಮಾರಣಾಂತಿಕ ದಾಳಿ ನಡೆಸಿದ್ದಾನೆ.
ಕಳೆದ ವರ್ಷ ಪೆಹಲ್ಗಾಂನಲ್ಲಿ ಉಗ್ರರು ಪ್ರವಾಸಿಗರ ಧರ್ಮ ಕೇಳಿ, ಕಲ್ಮಾ ಪಠಿಸಲು ಹೇಳಿ ಹತ್ಯೆ ಮಾಡಿದ್ದರು. ಅದೇ ಮಾದರಿಯಲ್ಲಿ ಅನ್ಸಾರಿ, ಈ ಇಬ್ಬರು ಗಾರ್ಡ್ಗಳಿಗೆ ಕಲ್ಮಾ ಪಠಿಸಲು ಸೂಚಿಸಿದ್ದಾನೆ. “ನಮಗೆ ಕಲ್ಮಾ ಗೊತ್ತಿಲ್ಲ, ನೀನು ಇಲ್ಲಿಂದ ಹೊರಡು” ಎಂದು ಗಾರ್ಡ್ಗಳು ಹೇಳಿದ ಬೆನ್ನಲ್ಲೇ, ಆಕ್ರೋಶಗೊಂಡ ಅನ್ಸಾರಿ ತನ್ನಲ್ಲಿದ್ದ ಹರಿತವಾದ ಚಾಕುವಿನಿಂದ ಇಬ್ಬರ ಮೇಲೂ ಅಟ್ಟಹಾಸ ಮೆರೆದಿದ್ದಾನೆ.
ಬಂಧಿತ ಝುಬೇರ್ ಅನ್ಸಾರಿ ಅಮೆರಿಕದಿಂದ ಮರಳಿದ್ದ ಸುಶಿಕ್ಷಿತನಾಗಿದ್ದು, ವೃತ್ತಿಯಲ್ಲಿ ಶಿಕ್ಷಕನಾಗಿದ್ದ. ಆದರೆ ಈತ ಇತ್ತೀಚೆಗೆ ISIS ಪ್ರಚಾರದ ವೀಡಿಯೊಗಳಿಂದ ಪ್ರೇರಿತನಾಗಿದ್ದ ಎಂಬ ಆಘಾತಕಾರಿ ವಿಷಯ ಬಯಲಾಗಿದೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾಳಿಯಿಂದ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನೂ ಸ್ಥಳೀಯರು ವೋಕಾರ್ಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

