ಕಿಯೋಂಜಹರ್ : ಒಡಿಶಾದ ಕಿಯೋಂಜಹರ್ ಜಿಲ್ಲೆಯ ಮಾಲಿಪೋಸಿ ಗ್ರಾಮದ ಓಡಿಶಾ ಗ್ರಾಮೀಣ ಬ್ಯಾಂಕ್ನಲ್ಲಿ ಈ ಮನಕಲಕುವ ಘಟನೆ ನಡೆದಿದೆ. ದಿಯಾನಾಲಿ ಗ್ರಾಮದ ನಿವಾಸಿ ಜೀತು ಮುಂಡಾ (50) ಎಂಬುವವರು ತಮ್ಮ ಮೃತ ಸಹೋದರಿ ಕಲ್ರಾ ಮುಂಡಾ (56) ಅವರ ಖಾತೆಯಲ್ಲಿದ್ದ 20,000 ರೂಪಾಯಿ ಹಣವನ್ನು ಹಿಂಪಡೆಯಲು ಈ ಸಾಹಸ ಮಾಡಿದ್ದಾರೆ.
ಜೀತು ಅವರ ಸಹೋದರಿ ಕಳೆದ ಜನವರಿ 26 ರಂದು ನಿಧನರಾಗಿದ್ದರು. ಹಣಕ್ಕಾಗಿ ಅವರು ಹಲವು ಬಾರಿ ಬ್ಯಾಂಕ್ಗೆ ಅಲೆದಿದ್ದರು. ಆದರೆ, ಬ್ಯಾಂಕ್ ಅಧಿಕಾರಿಗಳು “ಖಾತೆದಾರರನ್ನು ಕರೆತಂದರೆ ಮಾತ್ರ ಹಣ ನೀಡುತ್ತೇವೆ” ಎಂದು ಹಠ ಹಿಡಿದಿದ್ದರು. ತಂಗಿ ಸಾವನ್ನಪ್ಪಿದ್ದಾಳೆ ಎಂದು ಜೀತು ಎಷ್ಟು ಹೇಳಿದರೂ ಅಧಿಕಾರಿಗಳು ನಂಬಿರಲಿಲ್ಲ. ಇದರಿಂದ ರೋಸಿಹೋದ ಜೀತು, ಹೂತುಹಾಕಿದ್ದ ತಂಗಿಯ ಶವದ ಹೊಂಡವನ್ನೇ ತೋಡಿ, ಅವಳ ಅಸ್ಥಿಪಂಜರವನ್ನು ಹೊರತೆಗೆದು ನೇರವಾಗಿ ಬ್ಯಾಂಕ್ಗೆ ಹೊತ್ತು ತಂದಿದ್ದಾರೆ!
ಬ್ಯಾಂಕ್ನಲ್ಲಿ ಅಸ್ಥಿಪಂಜರ ನೋಡಿ ಅಧಿಕಾರಿಗಳು ಮತ್ತು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಧಾವಿಸಿದ ಪಟಾಣಾ ಪೊಲೀಸ್ ಅಧಿಕಾರಿ ಕಿರಣ್ ಪ್ರಸಾದ್ ಸಾಹು, “ಜೀತು ಅನಕ್ಷರಸ್ಥ ಬುಡಕಟ್ಟು ವ್ಯಕ್ತಿ. ವಾರಸುದಾರ ಅಥವಾ ನಾಮಿನಿ ನಿಯಮಗಳು ಆತನಿಗೆ ತಿಳಿದಿಲ್ಲ. ಆದರೆ ಬ್ಯಾಂಕ್ ಅಧಿಕಾರಿಗಳು ಆತನಿಗೆ ಸರಿಯಾದ ಮಾರ್ಗದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

