ಬಂಟ್ವಾಳ : ಬಂಟ್ವಾಳ ತಾಲೂಕಿನ ಮೂಡ ಗ್ರಾಮದ ಗೋರೆಮಾರ್ ಎಂಬಲ್ಲಿರುವ ಪ್ರಕಾಶ್ ಎಂಬವರ ಮನೆಗೆ ಯಾರೂ ಇಲ್ಲದ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ದೋಚಿದ್ದಾರೆ. ಮನೆಯ ಯಜಮಾನ ಪ್ರಕಾಶ್ ಅವರು ಕೇರಳದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ಮತ್ತು ಮಕ್ಕಳು ಶಾಲಾ ರಜೆಯ ಹಿನ್ನೆಲೆಯಲ್ಲಿ ಸಂಬಂಧಿಕರ ಮನೆಗೆ ತೆರಳಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ಕಳ್ಳರು ಮನೆಯ ಬಾಗಿಲ ಚಿಲಕ ಮುರಿದು ಒಳ ನುಗ್ಗಿದ್ದಾರೆ.
ಮನೆಯ ಬೆಡ್ರೂಂ ಮತ್ತು ಹಾಲ್ನಲ್ಲಿದ್ದ ಒಟ್ಟು 5 ಸ್ಟೀಲ್ ಕಬಾಟುಗಳನ್ನು ಆಯುಧಗಳಿಂದ ಮೀಟಿ ತಪಾಸಣೆ ನಡೆಸಲಾಗಿದೆ. ಲಾಕರ್ನಲ್ಲಿದ್ದ 16 ಗ್ರಾಂ ತೂಕದ 3 ಜೊತೆ ಚಿನ್ನದ ಬೆಂಡೋಲೆ, 18 ಗ್ರಾಂ ತೂಕದ 3 ಉಂಗುರಗಳು ಹಾಗೂ 65,000 ರೂ. ನಗದು ಕಳ್ಳತನವಾಗಿದೆ. ಅಷ್ಟೇ ಅಲ್ಲದೆ, ದೇವರ ಮಂಟಪದಲ್ಲಿದ್ದ 20 ಸಾವಿರ ರೂ. ಮೌಲ್ಯದ ಬೆಳ್ಳಿಯ ಕೃಷ್ಣನ ವಿಗ್ರಹ ಮತ್ತು ಕಾಣಿಕೆ ಡಬ್ಬಿಯಲ್ಲಿದ್ದ 5,000 ರೂ. ಹಣವನ್ನೂ ಕಳ್ಳರು ಬಿಟ್ಟಿಲ್ಲ. ಒಟ್ಟು 4,13,000 ರೂ. ಮೌಲ್ಯದ ಸೊತ್ತುಗಳು ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬೆಳಕಿಗೆ ಬಂದಿದ್ದು ಹೇಗೆ?
ಗಿಡಗಳಿಗೆ ನೀರು ಹಾಕಲು ನೆರೆಮನೆಯ ವ್ಯಕ್ತಿಗೆ ಜವಾಬ್ದಾರಿ ವಹಿಸಲಾಗಿತ್ತು. ಮೇ 6 ರಂದು ಅವರು ನೀರು ಹಾಕಲು ಬಂದಾಗ ಮನೆಯ ಮುಂಭಾಗದ ಬಾಗಿಲು ತೆರೆದಿರುವುದು ಕಂಡುಬಂದಿದೆ. ತಕ್ಷಣ ಮನೆಯವರಿಗೆ ಮಾಹಿತಿ ನೀಡಲಾಗಿದ್ದು, ಅವರು ಬಂದು ನೋಡಿದಾಗ ಕಬಾಟಿನಲ್ಲಿದ್ದ ಬಟ್ಟೆಬರೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿರುವುದು ಮತ್ತು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಜಾಲ ಬೀಸಿದ್ದಾರೆ.
ಇದನ್ನು ಓದಿ : Thalapathy Vijay : ಡಿಎಂಕೆ-ಎಐಎಡಿಎಂಕೆ ಮಣಿಸಲು 107 ಶಾಸಕರ ‘ರಾಜೀನಾಮೆ’ ಅಸ್ತ್ರ ಪ್ರಯೋಗಿಸಿದ ನಟ ವಿಜಯ್!

