ಮಂಗಳೂರು : ಕೆಲ ತಿಂಗಳುಗಳ ಹಿಂದೆ ಮಂಗಳೂರಿನ ರಸ್ತೆ ಬದಿಯಲ್ಲಿ ನಡೆಯಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದ, ಮಾನಸಿಕ ಅಸ್ವಸ್ಥನಂತೆ ಕಂಡ ವ್ಯಕ್ತಿಯೊಬ್ಬನನ್ನು ನಗರದ ಖ್ಯಾತ ‘ವೈಟ್ ಡೋವ್ಸ್’ (White Doves) ಎಂಬ ಸೇವಾ ಸಂಸ್ಥೆಯ ಕಾರ್ಯಕರ್ತರು ರಕ್ಷಿಸಿದ್ದರು. ಆತನ ದೇಹದ ತುಂಬೆಲ್ಲಾ ಗಾಯಗಳು ಮತ್ತು ಫಂಗಲ್ ಇನ್ಫೆಕ್ಷನ್ ಆಗಿದ್ದು, ಸ್ಥಿತಿ ಅತ್ಯಂತ ದಯನೀಯವಾಗಿತ್ತು. ಸಂಸ್ಥೆಯು ಆತನನ್ನು ಚಿಕಿತ್ಸೆ ನೀಡಿ, ಪ್ರೀತಿಯಿಂದ ಆರೈಕೆ ಮಾಡಿ ಗುಣಮುಖನನ್ನಾಗಿಸಿತ್ತು.
ಗುಣಮುಖನಾದ ಮೇಲೆ ಆ ವ್ಯಕ್ತಿ ತನ್ನ ಹೆಸರು ‘ಅನೀಶ್ ಕುಮಾರ್’ ಎಂದು ಗುರುತಿಸಿಕೊಂಡಿದ್ದ. ತನ್ನ ತಾಯಿಯನ್ನು ನೋಡಬೇಕೆಂದು ಹಂಬಲಿಸುತ್ತಿದ್ದ ಆತನನ್ನು ಕುಟುಂಬದ ಜೊತೆ ಸೇರಿಸಲು ಸಂಸ್ಥೆ ಪ್ರಯತ್ನ ಆರಂಭಿಸಿತು. ಈ ವೇಳೆ ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ಅಧಿಕಾರಿಗಳಿಗೆ ಭೀಕರ ಸತ್ಯವೊಂದು ತಿಳಿದು ಬಂದಿದೆ. ಈ ಅನೀಶ್ ಕುಮಾರ್ ಎಂಬಾತ 2024ರ ಏಪ್ರಿಲ್ 25ರಂದು ತನ್ನ ಸ್ನೇಹಿತನನ್ನೇ ಕಲ್ಲಿನಿಂದ ಜಜ್ಜಿ ಕೊಂದಿದ್ದ (IPC Section 302) ಕೊಲೆ ಕೇಸಿನ ಪ್ರಮುಖ ಆರೋಪಿಯಾಗಿದ್ದ!
ಪೊಲೀಸರ ಪ್ರಕಾರ, ಈತ ಕೊಲೆ ಕೇಸಿನಲ್ಲಿ ಬಂಧನಕ್ಕೊಳಗಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆದರೆ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಹಲವು ತಿಂಗಳುಗಳಿಂದ ನಾಪತ್ತೆಯಾಗಿದ್ದ. ಅಚ್ಚರಿಯ ವಿಷಯವೆಂದರೆ, ತಾನು ಕೊಲೆ ಮಾಡಿರುವ ವಿಷಯವೇ ಮರೆತು ಹೋದಂತೆ ಆತ ವರ್ತಿಸುತ್ತಿದ್ದಾನೆ. “ತಾನು ಮನೆಗೆ ಹೋಗಬೇಕು, ತಾಯಿಯನ್ನು ನೋಡಬೇಕು” ಎಂದು ಆತ ಪದೇ ಪದೇ ಹೇಳುತ್ತಿರುವುದು ಸಂಸ್ಥೆಯ ಸಿಬ್ಬಂದಿಯನ್ನು ಭಾವುಕರನ್ನಾಗಿಸಿದೆ. ಸದ್ಯ ಈ ಪ್ರಕರಣವು ಮಾನಸಿಕ ಆರೋಗ್ಯ ಮತ್ತು ಅಪರಾಧ ಜಗತ್ತಿನ ನಡುವಿನ ಸಂಕೀರ್ಣತೆಯನ್ನು ಅನಾವರಣಗೊಳಿಸಿದೆ.
ಇದನ್ನು ಓದಿ : Tamil Nadu : “ರಾಜ್ಯಪಾಲರ ಅಗತ್ಯವಿಲ್ಲ” ಕನಿಮೋಳಿ ಕರುಣಾನಿಧಿ ಸ್ಫೋಟಕ ಹೇಳಿಕೆ ; ಡಿಎಂಕೆ-ಎಐಎಡಿಎಂಕೆ ಮೈತ್ರಿ ವದಂತಿಗೆ ತೆರೆ!

