ಮಂಗಳೂರು, ಮೇ 12 : ಉಳ್ಳಾಲದ ಹೊಯ್ಗೆಯಲ್ಲಿ ಮನುಷ್ಯನ ಮನಕಲಕುವ ಘಟನೆಯೊಂದು ಸಂಭವಿಸಿದೆ. ಇಸ್ರೇಲ್ನಲ್ಲಿ ಉದ್ಯೋಗಿಯಾಗಿದ್ದ ಸೂರ್ಯ ಪ್ರಕಾಶ್ ಡಿಸೋಜಾ (42) ಎಂಬವರು ಸೋಮವಾರ ಮುಂಜಾನೆ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ಸೂರ್ಯ ಪ್ರಕಾಶ್ ಅವರು ದಿವಂಗತ ಜೆರ್ರಿ ಡಿಸೋಜಾ ಮತ್ತು ಇಸಾಬೆಲ್ಲಾ ದಂಪತಿಯ ಪುತ್ರನಾಗಿದ್ದು, ಕಳೆದ ಒಂದು ವರ್ಷದಿಂದ ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗಷ್ಟೇ ತನ್ನ ಸಹೋದರನ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಸೂರ್ಯ ಪ್ರಕಾಶ್ ಮತ್ತು ಇಸ್ರೇಲ್ನಲ್ಲಿ ಕೆಲಸ ಮಾಡುವ ಅವರ ಸಹೋದರಿ ಊರಿಗೆ ಬಂದಿದ್ದರು. ಮದುವೆ ಸಂಭ್ರಮ ಮುಗಿಸಿ ಮೇ 17 ರಂದು ಇಸ್ರೇಲ್ಗೆ ಮರಳಲು ಇವರು ಸಿದ್ಧತೆ ನಡೆಸಿದ್ದರು.
ಸೋಮವಾರ ಮುಂಜಾನೆ ಸಹೋದರಿ ಮತ್ತು ಭಾವ ಕೆಲಸಕ್ಕೆ ತೆರಳಿದ ನಂತರ, ಸೂರ್ಯ ಪ್ರಕಾಶ್ ತಮ್ಮ ಮಲಗುವ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಇವರ ತಾಯಿ ಇಸಾಬೆಲ್ಲಾ ಅವರು ಕೋಣೆಗೆ ಪ್ರವೇಶಿಸಿದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ. ಕಳೆದ ಕೆಲವು ದಿನಗಳಿಂದ ಸತತ ಎದೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಸೂರ್ಯ ಪ್ರಕಾಶ್ ಅವರು ಚಿಕಿತ್ಸೆ ಪಡೆಯುತ್ತಿದ್ದರು. ದೈಹಿಕ ನೋವು ಮತ್ತು ಖಿನ್ನತೆಯಿಂದ ಬೇಸತ್ತು ಇವರು ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ ಎಂದು ಶಂಕಿಸಲಾಗಿದ್ದು, ಸಾಯುವ ಮುನ್ನ ಆರೋಗ್ಯದ ಸಮಸ್ಯೆಗಳ ಕುರಿತು ಡೆತ್ ನೋಟ್ ಬರೆದಿಟ್ಟಿದ್ದಾರೆ ಎನ್ನಲಾಗಿದೆ.
ಎಲ್ಲರೊಂದಿಗೂ ಅತ್ಯಂತ ಆತ್ಮೀಯವಾಗಿ ಬೆರೆಯುತ್ತಿದ್ದ ಸೂರ್ಯ ಪ್ರಕಾಶ್ ಅವರು ಭಾನುವಾರವಷ್ಟೇ ಸ್ಥಳೀಯ ಸಂಘಟನೆಯ ಕಾರ್ಯಕ್ರಮದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದರು. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಆಕ್ರಂದನ ಮುಗಿಲು ಮುಟ್ಟಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರ ಅಂತ್ಯಕ್ರಿಯೆಯು ಮೇ 12 ರಂದು ತೊಕ್ಕೊಟ್ಟು ಚರ್ಚ್ನಲ್ಲಿ ಜರುಗಲಿದೆ.

