ಜಬಲ್ಪುರ : ಗುರುವಾರ ಸಂಜೆ ಜಬಲ್ಪುರದ ಬಾರ್ಗಿ ಡ್ಯಾಮ್ನಲ್ಲಿ ಸುಮಾರು ದೋಣಿಯಲ್ಲಿ ಒಟ್ಟು 30 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ 17 ಮಂದಿಯನ್ನು ರಕ್ಷಿಸಲಾಗಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 4 ಮಂದಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಮೃತಪಟ್ಟವರಲ್ಲಿ ದೆಹಲಿ ಮೂಲದ ತಾಯಿ ಮತ್ತು ಅವರ ನಾಲ್ಕು ವರ್ಷದ ಮಗು ಸೇರಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ವೇಳೆ, ಮಗುವು ತಾಯಿಯ ಅಪ್ಪುಗೆಯಲ್ಲೇ ಮೃತಪಟ್ಟಿರುವುದು ಕಂಡುಬಂದಿದೆ. ಈ ಹೃದಯವಿದ್ರಾವಕ ದೃಶ್ಯವನ್ನು ಕಂಡ ರಕ್ಷಣಾ ಸಿಬ್ಬಂದಿ ಕೂಡ ಮಮ್ಮಲ ಮರುಗಿದ್ದಾರೆ.
ದುರಂತದ ಸಂದರ್ಭದಲ್ಲಿ ತಾಯಿಯೊಬ್ಬರು ತನ್ನ ಮಗುವನ್ನು ರಕ್ಷಿಸಿಕೊಳ್ಳಲು ಮಾಡಿದ ಪ್ರಯತ್ನ ವಿಫಲವಾಗಿದೆ. ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಅವರ ಮೃತದೇಹ ಒಂದೇ ಲೈಫ್ ಜಾಕೆಟ್ನಲ್ಲಿ ಪತ್ತೆಯಾಗಿರುವುದು ಕಂಡುಬಂದಿದೆ. ‘ತಾಯಿ ಪ್ರೀತಿಯ ಪರಾಕಾಷ್ಠೆ’ ಎನಿಸುವ ಈ ಚಿತ್ರವನ್ನು ಕಂಡ ಪೊಲೀಸ್ ಅಧಿಕಾರಿಯೊಬ್ಬರು, “ಈ ಚಿತ್ರಕ್ಕಿಂತ ದುಃಖದ ದೃಶ್ಯ ಬೇರೆ ಇರಲಾರದು” ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಲೈಫ್ ಜಾಕೆಟ್ ಇದ್ದರೂ ಸಾವು ಯಾಕೆ?
ದೋಣಿ ಮಗುಚಿದಾಗ ತಾಯಿ ತನ್ನ ಮಗುವನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಇಬ್ಬರೂ ದೋಣಿಯ ಕ್ಯಾಬಿನ್ ಒಳಭಾಗದಲ್ಲಿ ಸಿಲುಕಿಕೊಂಡಿದ್ದಾರೆ. ಕ್ಯಾಬಿನ್ನಿಂದ ಹೊರಬರಲು ಸಾಧ್ಯವಾಗದೆ, ಉಸಿರುಗಟ್ಟಿ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಒಂದು ವೇಳೆ ಅವರು ನೀರಿನ ಮೇಲೆ ಬಂದಿದ್ದರೆ, ಲೈಫ್ ಜಾಕೆಟ್ನ ಸಹಾಯದಿಂದ ಬದುಕುಳಿಯುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುರಂತದ ಸ್ಥಳದಲ್ಲಿ ಎನ್ಡಿಆರ್ಎಫ್ (NDRF) ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಘಟನೆಯ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಈ ದುರಂತಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪ್ರವಾಸೋದ್ಯಮ ಸಚಿವ ಧರ್ಮೇಂದ್ರ ಭಾವ್ ಸಿಂಗ್ ಲೋಧಿ ಅವರು ಸ್ಥಳದಲ್ಲೇ ಇದ್ದು ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದಾರೆ. ಘಟನೆಗೆ ಕಾರಣವಾದವರ ವಿರುದ್ಧ ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ.

