ಬೆಳಗಾವಿ : ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಹೊಂಡದ ಬಳಿ ಭಾನುವಾರ ಈ ದುರ್ಘಟನೆ ನಡೆದಿದೆ. ಶಹಾಪೂರ ಶಿವಾಜಿ ನಗರದ ಜಿ.ಡಿ. ಗಲ್ಲಿಯ ನಿವಾಸಿಗಳಾದ ಶಿವಂ ಪರಶುರಾಮ ಸುಂಡಿಕರ್ (07) ಮತ್ತು ಪರಶುರಾಮ ರಾಜು ನಿಲಜಕರ್ (11) ಮೃತಪಟ್ಟ ಬಾಲಕರು. ಈ ನಾಲ್ವರು ಬಾಲಕರು ಈಜಲು ಹೊಂಡದ ಬಳಿ ಬಂದಿದ್ದು, ಈ ವೇಳೆ ಹೊಂಡದ ಪಕ್ಕದಲ್ಲಿದ್ದ ಹಳೆಯ ಗೋಡೆಯ ಮೇಲೆ ಕುಳಿತಿದ್ದರು.
ನಾಲ್ವರು ಬಾಲಕರು ಗೋಡೆಯ ಮೇಲೆ ಕುಳಿತಿದ್ದಾಗ, ಏಕಾಏಕಿ ಗೋಡೆ ಕುಸಿದು ನೇರವಾಗಿ ಹೊಂಡಕ್ಕೆ ಬಿದ್ದಿದೆ. ಗೋಡೆಯ ಕಲ್ಲುಗಳು ಮತ್ತು ಅವಶೇಷಗಳು ಬಾಲಕರ ಮೇಲೆ ಬಿದ್ದ ಪರಿಣಾಮ, ಇಬ್ಬರು ಬಾಲಕರು ಈಜಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿದ್ದಾರೆ. ಉಳಿದ ಇಬ್ಬರು ಬಾಲಕರು ಹೇಗೋ ಈಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳೀಯರು, ಪೊಲೀಸರು, ಅಗ್ನಿಶಾಮಕ ದಳ, ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಈಜು ನಿಪುಣರು ಸ್ಥಳಕ್ಕೆ ಧಾವಿಸಿದ್ದಾರೆ. ಈಗಾಗಲೇ ಒಂದು ಮೃತದೇಹವನ್ನು ಹೊರತೆಗೆಯಲಾಗಿದ್ದು, ಮತ್ತೊಂದು ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ತೀವ್ರಗೊಂಡಿದೆ. ಮೃತ ಬಾಲಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

