ಬೆಂಗಳೂರು : ಬೆಂಗಳೂರಿನಲ್ಲಿ ಸುರಿದ ಭೀಕರ ಮಳೆ ಮತ್ತು ಬಿರುಗಾಳಿಯ ಆರ್ಭಟಕ್ಕೆ ಬೌರಿಂಗ್ ಆಸ್ಪತ್ರೆ ಬಳಿ ಕಾಂಪೌಂಡ್ ಗೋಡೆ ಕುಸಿದು ಏಳು ಮಂದಿ ಮೃತಪಟ್ಟಿದ್ದರು. ಈ ದುರಂತದಲ್ಲಿ ಮೃತಪಟ್ಟವರ ಮರಣೋತ್ತರ ಪರೀಕ್ಷೆಯನ್ನು ಬುಧವಾರ ರಾತ್ರಿಯೇ ನಡೆಸಲಾಗಿದ್ದು, ಗುರುವಾರ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತಪಟ್ಟ ಏಳು ಮಂದಿಯಲ್ಲಿ ಮೂವರು ಬೆಂಗಳೂರಿನವರಾಗಿದ್ದರೆ, ಇಬ್ಬರು ಕೇರಳದವರು, ಬಿಹಾರ ಮತ್ತು ಅಸ್ಸಾಂನ ತಲಾ ಒಬ್ಬರು ಸೇರಿದ್ದಾರೆ. ಕೇರಳದವರು ಇಲ್ಲಿಗೆ ಅಧ್ಯಯನ ಪ್ರವಾಸಕ್ಕೆ (Study Tour) ಬಂದಿದ್ದರೆ, ಉಳಿದವರು ರಸ್ತೆಬದಿಯ ವ್ಯಾಪಾರಿಗಳಾಗಿದ್ದರು. ಮೃತರ ಪೈಕಿ ರಸ್ತೆಬದಿಯ ವ್ಯಾಪಾರಿಯೊಬ್ಬರ ಮಗಳೂ ಸೇರಿದ್ದು, ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.
ಭಾರೀ ಮಳೆ, ಬಲವಾದ ಗಾಳಿ ಮತ್ತು ಆಲಿಕಲ್ಲಿನ ಮಳೆಯಿಂದ ರಕ್ಷಣೆ ಪಡೆಯಲು ಈ ಏಳು ಮಂದಿ ಗೋಡೆಯ ಪಕ್ಕ ಆಶ್ರಯ ಪಡೆದಿದ್ದರು. ದುರದೃಷ್ಟವಶಾತ್, ಆ ಸಮಯದಲ್ಲಿ ಗೋಡೆ ಏಕಾಏಕಿ ಕುಸಿದು ಬಿದ್ದಿದ್ದರಿಂದ ಅವರೆಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ಈ ಅಪಘಾತದಲ್ಲಿ ಗಾಯಗೊಂಡಿರುವ ಏಳು ಮಂದಿಗೆ ಸರ್ಕಾರದಿಂದಲೇ ಉಚಿತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

