ಬೈಂದೂರು : ಬೈಂದೂರು ತಾಲೂಕಿನ ಪಡವರಿ ಗ್ರಾಮದಲ್ಲಿ ನಡೆದಿದ್ದ ಚಿನ್ನದ ಕಳ್ಳತನ ಪ್ರಕರಣವನ್ನು ಭೇದಿಸಿರುವ ಬೈಂದೂರು ಪೊಲೀಸರು, ಕುಖ್ಯಾತ ಅಂತರರಾಜ್ಯ ಕಳ್ಳ ಉಮೇಶ್ ಬಾಳಿಗಾರ್ ಮಲ್ಲಾರು ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯಿಂದ ಅಂದಾಜು 2.81 ಲಕ್ಷ ರೂ. ಮೌಲ್ಯದ 22 ಗ್ರಾಂ ತೂಕದ ಚಿನ್ನದ ಬಿಸ್ಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಡವರಿ ಗ್ರಾಮದ ಗುರುಕಿರಣ್ ಪಟ್ವಾಲ್ ಎಂಬುವರ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಉಮೇಶ್ ಬಾಳಿಗಾರ್ ಕಳ್ಳತನ ಮಾಡಿದ್ದನು. ಕದ್ದ ಆಭರಣಗಳನ್ನು ಕರಗಿಸಿ ಚಿನ್ನದ ಬಿಸ್ಕೆಟ್ ಮಾಡಿ ತಮಿಳುನಾಡಿನ ಮಧುರೈನಲ್ಲಿ ಬಚ್ಚಿಟ್ಟಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಅದರಂತೆ ಬೈಂದೂರು ಪೊಲೀಸರ ತಂಡ ಮಧುರೈಗೆ ತೆರಳಿ ಯಶಸ್ವಿಯಾಗಿ ಚಿನ್ನವನ್ನು ವಶಪಡಿಸಿಕೊಂಡಿದೆ.
ಬಂಧಿತ ಆರೋಪಿಯ ಮೇಲೆ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ವಿವಿಧ ಠಾಣೆಗಳಲ್ಲಿ ಒಟ್ಟು 36 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 8 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ಇನ್ನುಳಿದ 23 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ತನಿಖಾ ಹಂತದಲ್ಲಿವೆ. ಕುಂದಾಪುರ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ ಮಾರ್ಗದರ್ಶನದಲ್ಲಿ ಬೈಂದೂರು ಸಿಪಿಐ ಶಿವಕುಮಾರ್ ಬಿ. ಮತ್ತು ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.

