ಕಾಸರಗೋಡು (ಎ.17): ಮಂಜೇಶ್ವರದ ಕುಂದು ಕೊಳಕೆ ಕಡಲತೀರದಲ್ಲಿ ಬುಧವಾರ ಸಂಜೆ ಸಮುದ್ರ ಅಲೆಗಳ ಅಬ್ಬರಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಗುರುವಾರ ಸಂಜೆ ಹೊಸಬೆಟ್ಟು ಬೀಚ್ನಲ್ಲಿ ಪತ್ತೆಯಾಗಿದೆ. ಮೃತ ಬಾಲಕನನ್ನು ಮಂಜೇಶ್ವರ ಚೌಕಿ ನಿವಾಸಿಗಳಾದ ಉಮ್ಮರುಲ್ ಫಾರೂಕ್ ಮತ್ತು ರಜೀನಾ ದಂಪತಿಯ ಪುತ್ರ ಮೊಹಮ್ಮದ್ ಝೈನುಲ್ ಅಬಿದ್ ಎಂದು ಗುರುತಿಸಲಾಗಿದೆ.
ಬುಧವಾರ ಸಂಜೆ ಮೊಹಮ್ಮದ್ ಝೈನುಲ್ ಅಬಿದ್ ತನ್ನ ಸ್ನೇಹಿತರೊಂದಿಗೆ ಕಡಲತೀರಕ್ಕೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ. ಸಮುದ್ರದ ಪ್ರಬಲ ಅಲೆಗಳ ಸುಳಿಗೆ ಸಿಲುಕಿದ ಬಾಲಕ ನೀರು ಪಾಲಾಗಿದ್ದನು. ತಕ್ಷಣವೇ ಸ್ಥಳೀಯ ನಿವಾಸಿಗಳು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ನಡೆಸಿದ್ದವು.
ಬಾಲಕ ನಾಪತ್ತೆಯಾದ ಸ್ಥಳದಿಂದ ಸ್ವಲ್ಪ ದೂರದಲ್ಲಿರುವ ಹೊಸಬೆಟ್ಟು ಕಡಲತೀರದಲ್ಲಿ ಗುರುವಾರ ಸಂಜೆ ಆತನ ಮೃತದೇಹ ಪತ್ತೆಯಾಗಿದೆ. ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

