ಮಂಗಳೂರು : ಉಳ್ಳಾಲ ಅಳಿವೆ ಸಮೀಪ ಮಂಗಳವಾರ ಸಂಜೆ ಸಮುದ್ರದ ಪ್ರಬಲ ಅಲೆಗಳ ಅಬ್ಬರಕ್ಕೆ ಸಿಲುಕಿ ಮೀನುಗಾರಿಕಾ ಬೋಟ್ವೊಂದು ಸಂಪೂರ್ಣವಾಗಿ ಮುಳುಗಡೆಯಾದ ಘಟನೆ ನಡೆದಿದೆ. ಅದೃಷ್ಟವಶಾತ್ ಬೋಟ್ನಲ್ಲಿದ್ದ ಐವರು ಮೀನುಗಾರರನ್ನು ಸಕಾಲದಲ್ಲಿ ರಕ್ಷಿಸಲಾಗಿದ್ದು, ಸಂಭವಿಸಬಹುದಾಗಿದ್ದ ಭಾರಿ ದುರಂತವೊಂದು ತಪ್ಪಿದೆ.
ಷರೀಫ್ ಎಂಬವರಿಗೆ ಸೇರಿದ ಬೋಟ್ನಲ್ಲಿ ಐವರು ಮೀನುಗಾರರು ಮಂಗಳವಾರ ಸಂಜೆ ಎಂದಿನಂತೆ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದರು. ಬೋಟ್ ಅಳಿವೆ ದಾಟಿ ಸಮುದ್ರದಲ್ಲಿ ಸ್ವಲ್ಪ ದೂರ ಸಾಗುತ್ತಿದ್ದಂತೆಯೇ, ರಭಸವಾಗಿ ಎದ್ದ ಬೃಹತ್ ಅಲೆಗಳ ಹೊಡೆತಕ್ಕೆ ಸಿಲುಕಿ ನಿಯಂತ್ರಣ ಕಳೆದುಕೊಂಡು ಮುಳುಗಡೆಗೊಂಡಿದೆ.
ಬೋಟ್ ಮುಳುಗುತ್ತಿದ್ದಂತೆ ಅದರೊಳಗೆ ಸಿಲುಕಿಕೊಂಡಿದ್ದ ಐವರು ಮೀನುಗಾರರನ್ನು ಸಮೀಪದಲ್ಲೇ ಮೀನುಗಾರಿಕೆಯಲ್ಲಿ ನಿರತರಾಗಿದ್ದ ಮತ್ತೊಂದು ಬೋಟ್ನ ಸಿಬ್ಬಂದಿ ತಕ್ಷಣವೇ ಧಾವಿಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಬೋಟ್ ಮುಳುಗಡೆಯಿಂದಾಗಿ ಅಪಾರ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ ಎಂದು ಬೋಟ್ ಮಾಲೀಕ ಷರೀಫ್ ಆಲಕಲ್ ಅವರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.