ತೋಕ್ಕೊಟ್ಟು , ಆಗಸ್ಟ್ 10 : ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ತೋಕ್ಕೊಟ್ಟು ಜಂಕ್ಷನ್ ಸಮೀಪವಿರುವ ವೈನಮ್ರ ಬಾರ್ನಲ್ಲಿ ರವಿವಾರ ಮಧ್ಯರಾತ್ರಿ 12:00 ರಿಂದ 12:20 ರ ವೇಳೆಗೆ ಈ ಹೈಡ್ರಾಮಾ ನಡೆದಿದೆ. ಕೃತ್ಯ ಎಸಗಿದ ಉಳ್ಳಾಲದ ಮಾರ್ಗತಲೆಯ ವೆಲ್ಡಿಂಗ್ ಕೆಲಸಗಾರ, ರೌಡಿಶೀಟರ್ ಮಹಮ್ಮದ್ ಶೇಕ್ (31) ಹಾಗೂ ಆತನಿಗೆ ಸಹಾಯ ಮಾಡಿದ ಮಂಚಿಲ ನಿವಾಸಿ ಆಟೋ ಚಾಲಕ ಅಶ್ಫಾಕ್ (28) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿ ಶೇಕ್ ಪೂರ್ಣ ಕುಡಿದ ಮತ್ತಿನಲ್ಲಿ ತಲವಾರ್ ಹಿಡಿದು ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಾ ರೋಡ್ನಲ್ಲಿ ಅಲೆದಾಡುತ್ತಿದ್ದನು. ನಂತರ ಅಶ್ಫಾಕ್ನ ಆಟೋ ಏರಿ ತೋಕ್ಕೊಟ್ಟುವಿನ ವೈನಮ್ರ ಬಾರ್ಗೆ ಬಂದಿಳಿದು, ಬಾರ್ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ಬೈದು ತಲವಾರ್ ತೋರಿಸಿ ತಕ್ಷಣವೇ ಬಾರ್ ಬಂದ್ ಮಾಡುವಂತೆ ಬೆದರಿಕೆ ಒಡ್ಡಿದ್ದಾನೆ.
ಬಾರ್ನಲ್ಲಿದ್ದ ಸಾರ್ವಜನಿಕರು ಹಾಗೂ ಕುಡಿಯುತ್ತಿದ್ದ ಗ್ರಾಹಕರು ತಲವಾರ್ ಹಿಡಿದಿದ್ದ ರೌಡಿಶೀಟರ್ನನ್ನು ನೋಡಿ ಪ್ರಾಣಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡಿಹೋಗಿದ್ದಾರೆ. ಬಾರ್ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಈ ಇಡೀ ಭೀಕರ ದೃಶ್ಯಾವಳಿಗಳು ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರಿ ಆತಂಕ ಸೃಷ್ಟಿಸಿತ್ತು. ಕೃತ್ಯದ ಗಂಭೀರತೆಯನ್ನು ಅರಿತ ಉಳ್ಳಾಲ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ತಲವಾರ್ ಸಮೇತ ಇಬ್ಬರೂ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ಮಹಮ್ಮದ್ ಶೇಕ್ ವಿರುದ್ಧ ಈಗಾಗಲೇ ಉಳ್ಳಾಲ ಠಾಣೆಯಲ್ಲಿ ಹಲವಾರು ಅಪರಾಧ ಪ್ರಕರಣಗಳು ದಾಖಲಾಗಿದ್ದು, ಶಸ್ತ್ರಾಸ್ತ್ರ ಕಾಯ್ದೆ (Arms Act) ಸೇರಿದಂತೆ ವಿವಿಧ ಕಠಿಣ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.