ಮೇಘಾಲಯ : 2025ರಲ್ಲಿ ಮೇಘಾಲಯದಲ್ಲಿ ನಡೆದಿದ್ದ ರಾಜ ರಘುವಂಶಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೋನಮ್ ರಘುವಂಶಿಗೆ ಶಿಲ್ಲಾಂಗ್ ನ್ಯಾಯಾಲಯವು ಜಾಮೀನು ನೀಡಿದೆ. ಇಂದೋರ್ ಮೂಲದ ಉದ್ಯಮಿಯಾದ ರಾಜ ರಘುವಂಶಿಯನ್ನು ಅವರ ಪತ್ನಿ ಸೋನಮ್ ಮತ್ತು ಆಕೆಯ ಪ್ರೇಮಿ ಸೇರಿ ಹತ್ಯೆ ಮಾಡಿದ್ದರು ಎಂಬ ಗಂಭೀರ ಆರೋಪವಿದೆ. ಪ್ರಸ್ತುತ ನ್ಯಾಯಾಲಯವು ಸೋನಮ್ಗೆ ಷರತ್ತುಬದ್ಧ ಜಾಮೀನು ನೀಡಿದ್ದು, ಆಕೆ ಶಿಲ್ಲಾಂಗ್ ನಗರವನ್ನು ಬಿಟ್ಟು ಹೊರಹೋಗುವಂತಿಲ್ಲ ಎಂದು ಆದೇಶಿಸಿದೆ. ಅಲ್ಲದೆ, ಪ್ರತಿದಿನ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಇಂದೋರ್ ಮೂಲದ ರಾಜ ರಘುವಂಶಿ ಮತ್ತು ಸೋನಮ್ ಮೇ 20ರಂದು ತಮ್ಮ ಹನಿಮೂನ್ಗಾಗಿ ಗುವಾಹಟಿ ಮತ್ತು ಶಿಲ್ಲಾಂಗ್ಗೆ ತೆರಳಿದ್ದರು. ಆದರೆ ಮೇ 23ರಂದು ಅವರಿಬ್ಬರೂ ನಿಗೂಢವಾಗಿ ನಾಪತ್ತೆಯಾಗಿದ್ದರು. ಸುದೀರ್ಘ 10 ದಿನಗಳ ಹುಡುಕಾಟದ ನಂತರ, ಜೂನ್ 2ರಂದು ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾದಲ್ಲಿರುವ ಆಳವಾದ ಕಂದಕವೊಂದರಲ್ಲಿ ರಾಜ ರಘುವಂಶಿಯ ಶವ ಪತ್ತೆಯಾಗಿತ್ತು. ಸೋನಮ್ ಮೊದಲು ಇದನ್ನು ದರೋಡೆಕೋರರ ಕೃತ್ಯ ಎಂದು ಬಿಂಬಿಸಿ ಪೊಲೀಸರ ದಾರಿ ತಪ್ಪಿಸಲು ಪ್ರಯತ್ನಿಸಿದ್ದಳು.
ಪೊಲೀಸರ ತೀವ್ರ ತನಿಖೆಯ ವೇಳೆ ಸೋನಮ್ ರೂಪಿಸಿದ್ದ ಭೀಕರ ಸಂಚು ಬಯಲಾಗಿತ್ತು. ಸೋನಮ್ಗೆ ರಾಜ್ ಕುಶ್ವಾಹ ಎಂಬಾತನೊಂದಿಗೆ ಪ್ರೇಮ ಸಂಬಂಧವಿತ್ತು, ಆದರೆ ಆಕೆಯ ಕುಟುಂಬಸ್ಥರು ಇದಕ್ಕೆ ಒಪ್ಪದೆ ರಾಜ ರಘುವಂಶಿಯೊಂದಿಗೆ ಮದುವೆ ಮಾಡಿಸಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಸೋನಮ್, ತನ್ನ ಪತಿಯನ್ನು ಕೊಲೆ ಮಾಡಲು ಪ್ರೇಮಿ ರಾಜ್ ಕುಶ್ವಾಹ ಮತ್ತು ಇತರ ಮೂವರು ಸಹಚರರೊಂದಿಗೆ ಸೇರಿ ಸ್ಕೆಚ್ ಹಾಕಿದ್ದಳು. ಪ್ರಸ್ತುತ ಸೋನಮ್ ಹೊರತುಪಡಿಸಿ ಉಳಿದ ನಾಲ್ವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

