ನವದೆಹಲಿ : ದುಬೈನಲ್ಲಿ ನೆಲೆಸಿರುವ ಕೇರಳ ಮೂಲದ ಇಂಜಿನಿಯರ್ ಆಸಿಫ್ ಆಜಾದ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರ ನೇತೃತ್ವದ ಪೀಠ ಸೋಮವಾರ ವಿಚಾರಣೆ ನಡೆಸಿತು. ತನ್ನ ಮೇಲೆ ಡ್ರಗ್ ಮಾಫಿಯಾ ಸಂಚು ರೂಪಿಸಿದೆ ಮತ್ತು ಕೇರಳದ ಪ್ರಕರಣವೊಂದರಿಂದ ದುಬೈನಲ್ಲಿ ತನಗೆ ಪ್ರಯಾಣ ನಿರ್ಬಂಧ (Travel Ban) ವಿಧಿಸಲಾಗಿದೆ ಎಂದು ಅರ್ಜಿದಾರರು ಕೋರ್ಟ್ಗೆ ತಿಳಿಸಿದ್ದರು.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದುಬೈನ ಮಾಲ್ ಒಂದರಿಂದಲೇ ವಿಚಾರಣೆಗೆ ಹಾಜರಾಗಿದ್ದ ಆಸಿಫ್ ಆಜಾದ್ ಅವರಿಗೆ, ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. “ನೀವು ಹೇಳುತ್ತಿರುವ ಕಥೆಯನ್ನು ಒಪ್ಪಿಕೊಳ್ಳಲು ನಮಗೆ ಸಾಧ್ಯವಿಲ್ಲ. ರಾಯಭಾರ ಕಚೇರಿಗೆ ಹೋಗಿ ಸಹಾಯ ಕೇಳಿ” ಎಂದು ನ್ಯಾಯಪೀಠ ಖಡಕ್ ಆಗಿ ಹೇಳಿದೆ. ರಾಯಭಾರ ಕಚೇರಿಯು ಆಜಾದ್ ಇರುವ ಸ್ಥಳದಿಂದ ಕೇವಲ 20 ಕಿ.ಮೀ ದೂರದಲ್ಲಿದ್ದು, ಸಾರ್ವಜನಿಕ ಸಾರಿಗೆಯ ಸೌಲಭ್ಯವನ್ನೂ ಬಳಸಿಕೊಳ್ಳಿ ಎಂದು ನ್ಯಾಯಮೂರ್ತಿಗಳು ಸಲಹೆ ನೀಡಿದ್ದಾರೆ.
ತನ್ನ ಮೇಲೆ ಕೇರಳದ ಕೆಲವು ಶಾಸಕರು ಕೂಡ ವಿರೋಧ ಹೊಂದಿದ್ದಾರೆ ಎಂದು ಆಜಾದ್ ಆರೋಪಿಸಿದಾಗ, ಮುಖ್ಯ ನ್ಯಾಯಮೂರ್ತಿಗಳು, “ಈಗ ಕೇರಳದಲ್ಲಿ ರಾಜಕೀಯ ಬದಲಾವಣೆಗಳಾಗುತ್ತಿವೆ (ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ), ಟಿವಿಯಲ್ಲಿ ನೋಡಿರಬಹುದು. ಆ ಬದಲಾದ ರಾಜಕೀಯ ವ್ಯವಸ್ಥೆಯ ಲಾಭವನ್ನು ಪಡೆದುಕೊಳ್ಳಿ” ಎಂದು ಚಟಾಕಿ ಹಾರಿಸಿದರು.
ತಾನು ಅಕ್ರಮ ವಲಸಿಗನಲ್ಲ ಮತ್ತು ತನ್ನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ ಎಂದು ಆಜಾದ್ ಅಳಲು ತೋಡಿಕೊಂಡರು. ತನಿಖೆ ಏಕಪಕ್ಷೀಯವಾಗಿದೆ ಮತ್ತು 41 ದಿನಗಳಾದರೂ ಯಾವುದೇ ಪ್ರಗತಿಯಾಗಿಲ್ಲ ಎಂದು ಅವರು ದೂರಿದರು. ಆದಾಗ್ಯೂ, ನ್ಯಾಯಾಲಯವು ಯಾವುದೇ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿ, ರಾಯಭಾರ ಕಚೇರಿಯನ್ನೇ ಸಂಪರ್ಕಿಸುವಂತೆ ಪುನರುಚ್ಚರಿಸಿದೆ.

