ಕಾಸರಗೋಡು : ನಕ್ಕಿಲಕಾಡಿನ ಚಂದ್ರನ್-ಅಜಿತಾ ದಂಪತಿಯ ಪುತ್ರಿ ಮಿತು ಚಂದ್ರ (4) ಮೃತಪಟ್ಟ ದುರ್ದೈವಿ ಬಾಲಕಿ. ಕಳೆದ ಸೋಮವಾರ ಮಿತು ತನ್ನ ಮನೆಯಂಗಳದಲ್ಲಿ ಆಟವಾಡುತ್ತಿದ್ದಾಗ, ರಾಶಿ ಹಾಕಿದ್ದ ಮರದ ತುಂಡುಗಳ ನಡುವೆ ಬಿದ್ದಿದ್ದ ಆಟಿಕೆ ಸಾಮಾನು ತಗೆದುಕೊಳ್ಳಲು ಹೋದಾಗ ನಾಗರಹಾವು ಕಚ್ಚಿದೆ. ಕೂಡಲೇ ಆಕೆಯನ್ನು ಕಾಸರಗೋಡು ಆಸ್ಪತ್ರೆಗೆ, ನಂತರ ಪಯ್ಯನೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಿತು ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿದ್ದಾಳೆ.
ಎಚ್ಚರಿಕೆ: ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾವುಗಳು ತಂಪಾದ ಸ್ಥಳಗಳನ್ನು ಹುಡುಕಿಕೊಂಡು ಮನೆ ಪರಿಸರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ಈ ಬೇಸಿಗೆಯಲ್ಲಿ ಹಾವು ಕಚ್ಚಿ ಮೃತಪಟ್ಟ ಮೊದಲ ಪ್ರಕರಣ ಇದಾಗಿದ್ದು, ಸಾರ್ವಜನಿಕರು ಮನೆಯ ಸುತ್ತಮುತ್ತ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

