ಕಾಸರಗೋಡು, ಏಪ್ರಿಲ್ 29 : ಮಾರ್ಚ್ 11ರಂದು ಕಾಸರಗೋಡು ನಗರದ ಹೊರವಲಯದ ನುಳ್ಳಿಪ್ಪಾಡಿ ಎಂಬಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಗದಗ ಜಿಲ್ಲೆಯ ಬಾಳೆಹೊಸೂರು ಮೂಲದ ಚಂದ್ರಶೇಖರ್ ಅಲಿಯಾಸ್ ಸುರೇಶ್ ಪಟ್ಟೋಡ್ (38) ಎಂಬುವವರ ಶವ ಪತ್ತೆಯಾಗಿತ್ತು. ಕಟ್ಟಡದ ಲಿಫ್ಟ್ಗಾಗಿ ತೋಡಲಾಗಿದ್ದ ಗುಂಡಿಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಇವರು ಅದೇ ಕಟ್ಟಡದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.
ಈ ಕೊಲೆ ಪ್ರಕರಣವನ್ನು ಭೇದಿಸಲು ಕಾಸರಗೋಡು ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಕರ್ನಾಟಕದ ವಲಸೆ ಕಾರ್ಮಿಕರ ಮೇಲೆ ಗಮನ ಕೇಂದ್ರೀಕರಿಸಿದ್ದ ಪೊಲೀಸರು, ಕೊಲೆ ನಡೆದ ನಂತರ ತಲೆಮರೆಸಿಕೊಂಡಿದ್ದ ಧಾರವಾಡ ಮೂಲದ ಎಚ್. ಮಂಜುನಾಥ್ ಅಲಿಯಾಸ್ ಮಂಜಪ್ಪ (45) ಎಂಬಾತನನ್ನು ಕೊನೆಗೂ ಹಾಸನದಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.
ಪೊಲೀಸ್ ವಿಚಾರಣೆಯ ವೇಳೆ ಆರೋಪಿ ಮಂಜಪ್ಪ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಕೇವಲ 2,000 ರೂಪಾಯಿ ಸಾಲದ ವಿಚಾರವಾಗಿ ಸುರೇಶ್ ಪಟ್ಟೋಡ್ ಮತ್ತು ಮಂಜಪ್ಪ ನಡುವೆ ವಿವಾದ ಉಂಟಾಗಿತ್ತು. ಹಣ ನೀಡಲು ಸುರೇಶ್ ನಿರಾಕರಿಸಿದಾಗ, ಕುಡಿದ ಅಮಲಿನಲ್ಲಿದ್ದ ಮಂಜಪ್ಪ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ.

