Tuesday, April 21, 2026
HomeLOCALMangaluru : ಅಪ್ರಾಪ್ತ ಮಕ್ಕಳ ಕೈಗೆ ವಾಹನ ನೀಡುವ ಮುನ್ನ ಎಚ್ಚರ: ಪೋಷಕರಿಗಿದು ಎಚ್ಚರಿಕೆಯ ಕರೆಗಂಟೆ!;...

Mangaluru : ಅಪ್ರಾಪ್ತ ಮಕ್ಕಳ ಕೈಗೆ ವಾಹನ ನೀಡುವ ಮುನ್ನ ಎಚ್ಚರ: ಪೋಷಕರಿಗಿದು ಎಚ್ಚರಿಕೆಯ ಕರೆಗಂಟೆ!; ಪ್ರೀತಿಯ ಹೆಸರಲ್ಲಿ ಮಕ್ಕಳ ಪ್ರಾಣಕ್ಕೆ ಕಂಟಕ ತರಬೇಡಿ!

ಮಂಗಳೂರು: ಇಂದಿನ ದಿನಗಳಲ್ಲಿ ರಸ್ತೆ ಸುರಕ್ಷತೆ ಎಂಬುದು ಕೇವಲ ಮಾತಿಗೆ ಸೀಮಿತವಾಗಬಾರದು, ಅದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಬೇಕು. ಅದರಲ್ಲೂ ಅಪ್ರಾಪ್ತ ಮಕ್ಕಳ ಕೈಗೆ ವಾಹನ ನೀಡುವ ಮುನ್ನ ಪೋಷಕರು ನೂರು ಬಾರಿ ಆಲೋಚಿಸುವುದು ಒಳಿತು. ಪ್ರಸ್ತುತ ಕಾನೂನು ನಿಯಮಗಳು ಅತ್ಯಂತ ಕಠಿಣವಾಗುತ್ತಿದ್ದು, ಲೈಸೆನ್ಸ್ ಇಲ್ಲದ ಮಕ್ಕಳಿಗೆ ಬೈಕ್ ಅಥವಾ ಸ್ಕೂಟರ್ ನೀಡುವುದು ಪೋಷಕರ ಪಾಲಿಗೆ ದೊಡ್ಡ ಸಂಕಷ್ಟ ತರಬಹುದು. ನಿಮ್ಮ ಮಕ್ಕಳ ಅಜಾಗರೂಕ ಚಾಲನೆಯಿಂದಾಗಿ ನಿಮ್ಮ ಚಾಲನಾ ಪರವಾನಗಿ (Driving License) ರದ್ದಾಗಲು ನೀವೇ ನೇರ ಕಾರಣರಾಗಬೇಡಿ.


ಇತ್ತೀಚೆಗೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಂಭವಿಸುತ್ತಿರುವ ಸರಣಿ ಅಪಘಾತಗಳು ಈ ಅಪಾಯಕ್ಕೆ ನೇರ ಕನ್ನಡಿಯಾಗಿವೆ. ಅನೇಕ ಪೋಷಕರು ಮಕ್ಕಳ ಮೇಲಿನ ಪ್ರೀತಿಯಿಂದ ಅಥವಾ ಅವರ ಹಠಕ್ಕೆ ಮಣಿದು ವಾಹನದ ಕೀ ನೀಡುತ್ತಾರೆ. ಆದರೆ, ಹೀಗೆ ವಾಹನ ಹಿಡಿದು ರಸ್ತೆಗೆ ಇಳಿಯುವ ಮಕ್ಕಳು ಮೂವರು-ನಾಲ್ವರು ಗೆಳೆಯರನ್ನು ಹಿಂಬದಿಯಲ್ಲಿ ಕುರಿಸಿಕೊಂಡು, ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಮೋಜು-ಮಸ್ತಿಯಲ್ಲಿ ತೊಡಗುತ್ತಾರೆ. ಹೆತ್ತವರ ಈ ಅಲ್ಪ ಅಶ್ರದ್ಧೆ ಮತ್ತು ಮಕ್ಕಳ ಅಜಾಗರೂಕತೆಯು ಯಾವುದೇ ಕ್ಷಣದಲ್ಲಿ ದೊಡ್ಡ ಆಪತ್ತನ್ನೇ ಆಹ್ವಾನಿಸಬಹುದು ಎಂಬುದು ನೆನಪಿರಲಿ.

ಒಂದು ಸಣ್ಣ ತಪ್ಪು ಇಡೀ ಕುಟುಂಬವನ್ನು ಜೀವನಪರ್ಯಂತ ಕಣ್ಣೀರಲ್ಲಿ ಮುಳುಗಿಸಬಹುದು. ರಸ್ತೆಯಲ್ಲಿ ಸಂಭವಿಸುವ ಭೀಕರ ಅಪಘಾತಗಳು ಕೇವಲ ಪ್ರಾಣಹಾನಿ ಮಾತ್ರವಲ್ಲದೆ, ಮಕ್ಕಳನ್ನು ಶಾಶ್ವತ ಅಂಗವೈಕಲ್ಯಕ್ಕೆ ತಳ್ಳುತ್ತಿವೆ. ಅದೆಷ್ಟೋ ಹೆತ್ತವರು ತಮ್ಮ ಮಕ್ಕಳನ್ನು ಕಳೆದುಕೊಂಡು ಇಂದಿಗೂ ರೋಧಿಸುತ್ತಿರುವ ಚಿತ್ರಣಗಳು ನಮ್ಮ ಸಮಾಜದಲ್ಲಿ ಧಾರಾಳವಾಗಿವೆ. ಮಕ್ಕಳ ಇಂತಹ ದುರವಸ್ಥೆಯನ್ನು ಕಂಡು ಪಶ್ಚಾತ್ತಾಪ ಪಡುವುದಕ್ಕಿಂತ, ಮುನ್ನೆಚ್ಚರಿಕೆ ವಹಿಸುವುದು ಬುದ್ಧಿವಂತಿಕೆಯ ಲಕ್ಷಣವಾಗಿದೆ.

ಕಾನೂನಿನ ಇಕ್ಕಟ್ಟಿಗೆ ಸಿಲುಕಿ ಭಾರಿ ಮೊತ್ತದ ದಂಡ ತೆರುವ ಬದಲು ಅಥವಾ ಪೊಲೀಸ್ ಠಾಣೆ ಅಲೆಯುವ ಬದಲು, ನಿಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರಿಗೆ ವಾಹನ ನೀಡುವ ಮುನ್ನ ಜಾಗ್ರತೆ ವಹಿಸಿ. ನೆನಪಿಡಿ, ರಸ್ತೆಯಲ್ಲಿ ಅವರು ತೋರುವ ಕ್ಷಣಿಕ ಮೋಜು ನಿಮ್ಮ ಇಡೀ ಜೀವನದ ನೆಮ್ಮದಿಯನ್ನೇ ಕಸಿದುಕೊಳ್ಳಬಹುದು. ಆದ್ದರಿಂದ, ಶಿಸ್ತು ಮತ್ತು ಸುರಕ್ಷತೆಗೆ ಮೊದಲ ಆದ್ಯತೆ ನೀಡಿ, ಅಪ್ರಾಪ್ತರಿಗೆ ವಾಹನ ನೀಡುವುದನ್ನು ಕಡ್ಡಾಯವಾಗಿ ನಿಲ್ಲಿಸಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!