ಬೆಂಗಳೂರು: ಐಪಿಎಲ್ 2026ರ ಇಂದಿನ 23ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 7:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು, ಸ್ಥಳೀಯ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ತವರು ನೆಲದಲ್ಲಿ ನಡೆಯುತ್ತಿರುವ ಈ ಪಂದ್ಯವು ಆರ್ಸಿಬಿ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದ್ದು, ಗೆಲುವಿನ ಲಯವನ್ನು ಮುಂದುವರಿಸುವ ತವಕದಲ್ಲಿದೆ.
ರಜತ್ ಪಾಟಿದಾರ್ ನೇತೃತ್ವದ ಆರ್ಸಿಬಿ ತಂಡವು ಸದ್ಯ 10 ತಂಡಗಳ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅವರದ್ದೇ ನೆಲದಲ್ಲಿ ಭರ್ಜರಿ ಜಯ ಸಾಧಿಸಿರುವ ಹುಮ್ಮಸ್ಸಿನಲ್ಲಿರುವ ಬೆಂಗಳೂರು ತಂಡಕ್ಕೆ ಇಂದು ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಲು ಸುವರ್ಣಾವಕಾಶವಿದೆ. ಒಂದು ವೇಳೆ ಇಂದು ಲಕ್ನೋ ತಂಡವನ್ನು ಮಣಿಸಿದರೆ, ಆರ್ಸಿಬಿ ಅಂಕಪಟ್ಟಿಯಲ್ಲಿ ನೇರವಾಗಿ ನಂ.1 ಪಟ್ಟವನ್ನು ಅಲಂಕರಿಸಲಿದೆ. ಇದು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಲಿದೆ.
ಮತ್ತೊಂದೆಡೆ, ರಿಷಬ್ ಪಂತ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಸದ್ಯ ಸಂಕಷ್ಟದ ಹಂತದಲ್ಲಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಜಯಿಸಿರುವ ಲಕ್ನೋ, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಅನುಭವಿಸಿರುವ ಲಕ್ನೋಗೆ ಇಂದು ಗೆಲುವು ಅನಿವಾರ್ಯವಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು ಸಣ್ಣ ಗಡಿಗಳನ್ನು ಹೊಂದಿರುವುದರಿಂದ ಮತ್ತು ಬ್ಯಾಟಿಂಗ್ಗೆ ಪೂರಕವಾಗಿರುವುದರಿಂದ ಎರಡೂ ತಂಡಗಳಿಂದ ಸಿಕ್ಸರ್-ಬೌಂಡರಿಗಳ ಸುರಿಮಳೆಯನ್ನೇ ನಿರೀಕ್ಷಿಸಬಹುದಾಗಿದೆ.
ಆರ್ಸಿಬಿ ತಂಡದ ಪಾಲಿಗೆ ರಜತ್ ಪಾಟಿದಾರ್ ಅವರ ನಾಯಕತ್ವದ ಜೊತೆಗೆ ಕ್ರುನಾಲ್ ಪಾಂಡ್ಯ ಅವರ ಹೊಸ ಶೈಲಿಯ ‘ಸ್ಪಿನ್ ಬೌನ್ಸರ್’ ಪ್ರಮುಖ ಅಸ್ತ್ರಗಳಾಗಿವೆ. ಲಕ್ನೋ ತಂಡದ ಬ್ಯಾಟರ್ಗಳನ್ನು ಕಟ್ಟಿಹಾಕಲು ಆರ್ಸಿಬಿ ಬೌಲರ್ಗಳು ವಿಶೇಷ ತಂತ್ರ ರೂಪಿಸಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನ ಗ್ಯಾಲರಿಯು ಸಂಪೂರ್ಣವಾಗಿ ಕೆಂಪು ಬಣ್ಣದ ಆರ್ಸಿಬಿ ಜೆರ್ಸಿಗಳಿಂದ ತುಂಬಿಹೋಗಲಿದ್ದು, ತವರಿನ ಬೆಂಬಲದೊಂದಿಗೆ ಬೆಂಗಳೂರು ತಂಡ ವಿಜಯದ ಪತಾಕೆ ಹಾರಿಸುತ್ತದೆಯೇ ಎಂದು ಕಾದು ನೋಡಬೇಕಿದೆ.

