ಮಂಗಳೂರು, ಜೂನ್ 6 : ಬೆಂಗಳೂರಿನಿಂದ ನಿಷೇಧಿತ ಎಂಡಿಎಂಎ ಮಾದಕ ವಸ್ತುವನ್ನು ತಂದು ಹೊಯ್ಗೆ ಬಜಾರ್ನ ಮನೆಯೊಂದರಿಂದ ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಜೂನ್ 5ರಂದು ಮೊದಲ ದಾಳಿ ನಡೆಸಿದ್ದಾರೆ. ಹೊಯ್ಗೆ ಬಜಾರ್ನ ‘ಜಾನಕಿ ನಿಲಯ’ ನಿವಾಸಿ ಪ್ರಣಾಮ್ ಕೋಟ್ಯಾನ್ (30) ಎಂಬಾತನನ್ನು ಬಂಧಿಸಲಾಗಿದ್ದು, ಈತನಿಂದ 10.40 ಲಕ್ಷ ರೂ. ಮೌಲ್ಯದ 104 ಗ್ರಾಂ MDMA, ಡಿಜಿಟಲ್ ತೂಕದ ಯಂತ್ರ ಹಾಗೂ ಜಿಪ್-ಲಾಕ್ ಕವರ್ಗಳನ್ನು ಜಪ್ತಿ ಮಾಡಲಾಗಿದೆ. ಈ ಕುಖ್ಯಾತನ ವಿರುದ್ಧ ಈಗಾಗಲೇ ಕೊಲೆ ಯತ್ನ, ಗಾಂಜಾ ಸಾಗಾಟ ಸೇರಿದಂತೆ 4ಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ದಾಖಲಾಗಿವೆ. ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ವೇಳೆ ನಡೆದ ಮತ್ತೊಂದು ಭರ್ಜರಿ ಕಾರ್ಯಾಚರಣೆಯಲ್ಲಿ, ಪಡವಿನಂಗಡಿಯ ಮನೆಯೊಂದರಿಂದ ಡ್ರಗ್ಸ್ ದಂಧೆ ನಡೆಸುತ್ತಿದ್ದ ವಾಲ್ಚಿಲ್ ನಿವಾಸಿ ಧನರಾಜ್ ಪೂಜಾರಿ ಅಲಿಯಾಸ್ ಧನು ವಾಲ್ಚಿಲ್ (33) ಎಂಬ ರೌಡಿಶೀಟರ್ನನ್ನು ಸಿಸಿಬಿ ಪೊಲೀಸರು ಸೆರೆಹಿಡಿದಿದ್ದಾರೆ. ಈತನಿಂದ 6 ಲಕ್ಷ ರೂ. ಮೌಲ್ಯದ 60 ಗ್ರಾಂ MDMA ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಬಂಧಿತ ಧನು ವಾಲ್ಚಿಲ್ ಸಾಮಾನ್ಯ ಪೆಡ್ಲರ್ ಅಲ್ಲ, ಈತನ ಮೇಲೆ ಮಂಗಳೂರಿನ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಭೀಕರ ಹಲ್ಲೆ ಸೇರಿದಂತೆ ಬರೋಬ್ಬರಿ 12ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿದ್ದು, ಈಗಾಗಲೇ ಒಂದು ಕೇಸ್ನಲ್ಲಿ 3 ವರ್ಷ ಜೈಲು ಶಿಕ್ಷೆಯೂ ಆಗಿತ್ತು! ಈ ಇಡೀ ಜಾಲದ ಹಿಂದೆ ದೊಡ್ಡ ಡ್ರಗ್ಸ್ ಜಾಲವೇ ಸಕ್ರಿಯವಾಗಿದ್ದು, ಉಳಿದವರಿಗಾಗಿ ಖಾಕಿ ಪಡೆ ಬಲೆ ಬೀಸಿದೆ.
Read This : Udupi : ಕುಕ್ಕುಜೆ ಸರ್ಕಾರಿ ಶಾಲೆಯ ಒಣಕಸದಲ್ಲಿ ನಿಗೂಢ ವಸ್ತು ಸ್ಫೋಟ; ನಾಲ್ವರಿಗೆ ಗಾಯ!



