ಮಂಜೇಶ್ವರ : ಕಾಸರಗೋಡು ಜಿಲ್ಲೆಯ ಮಂಜೇಶ್ವರ ರೈಲು ನಿಲ್ದಾಣದ ಆವರಣ ಮತ್ತು ಹಳಿಗಳ ಪರಿಸರದಲ್ಲಿ ಮಂಗಳವಾರ ರಾತ್ರಿ ಈ ಭೀಕರ ದುರಂತಗಳು ನಡೆದಿವೆ. ಮೃತರನ್ನು ಮಂಜೇಶ್ವರದಲ್ಲಿ ವಾಸವಾಗಿದ್ದ, ಮೂಲತಃ ಮೊಗ್ರಾಲ್ ಪುತ್ತೂರಿನ ಉಮೇಶ್ (39) ಮತ್ತು ಮಂಜೇಶ್ವರ ಕೀರ್ತೀಶ್ವರದ ಮನೀಶ್ (35) ಎಂದು ಗುರುತಿಸಲಾಗಿದೆ. ಒಂದೇ ದಿನ ಕೆಲವೇ ಗಂಟೆಗಳ ಅವಧಿಯಲ್ಲಿ ಹಳಿಗಳ ಮೇಲೆ ಎರಡು ಶವಗಳು ಪತ್ತೆಯಾಗಿರುವುದು ಇಡೀ ಮಂಜೇಶ್ವರ ಪರಿಸರದಲ್ಲಿ ಭಾರಿ ಆತಂಕ ಮತ್ತು ಸಸ್ಪೆನ್ಸ್ ಮೂಡಿಸಿದೆ.
ಮೊದಲ ಘಟನೆಯಲ್ಲಿ ಮಂಗಳವಾರ ಸಂಜೆ ಸುಮಾರು ಏಳು ಗಂಟೆಯ ವೇಳೆಗೆ ಹಳಿಯ ಪಕ್ಕದಲ್ಲಿ ರೈಲು ಬಡಿದು ಮೃತಪಟ್ಟ ಸ್ಥಿತಿಯಲ್ಲಿ ಉಮೇಶ್ ಅವರ ಮೃತದೇಹ ಪತ್ತೆಯಾಗಿದೆ. ಈ ಘಟನೆಯ ಆಘಾತ ಮಾಸುವ ಮುನ್ನವೇ, ಅದೇ ದಿನ ರಾತ್ರಿ 9 ಗಂಟೆಯ ವೇಳೆಗೆ ರೈಲ್ವೇ ಹಳಿಯ ಮೇಲೆ ಕೀರ್ತೀಶ್ವರದ ಮನೀಶ್ ಅವರ ಮೃತದೇಹ ಭೀಕರವಾಗಿ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಬ್ಬರೂ ಹಳಿ ದಾಟುವಾಗ ಆಕಸ್ಮಿಕವಾಗಿ ರೈಲು ಬಡಿದು ಮೃತಪಟ್ಟಿದ್ದಾರೆಯೇ ಅಥವಾ ಇದರ ಹಿಂದೆ ಬೇರೆನಾದರೂ ಕಾರಣವಿದೆಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಸದ್ಯ ಇಬ್ಬರ ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಮಂಜೇಶ್ವರ ಠಾಣಾ ಪೊಲೀಸರು ಮಹಜರು ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.



