ಚೆನ್ನೈ : ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಮ್ಯಾಜಿಕ್ ನಂಬರ್ ತಲುಪಲು ಕಸರತ್ತು ನಡೆಸುತ್ತಿರುವ ವಿಜಯ್ ನೇತೃತ್ವದ ಟಿವಿ ಕೆ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಎಎಂಎಂಕ ಪಕ್ಷದ ಶಾಸಕರು ತಮಗೆ ಬೆಂಬಲ ನೀಡಿದ್ದಾರೆ ಎಂದು ಟಿವಿ ಕೆ ಪಕ್ಷವು ‘ಆಧಾರ’ಗಳನ್ನು ಹಂಚಿಕೊಂಡ ಬೆನ್ನಲ್ಲೇ, ಎಎಂಎಂಕ ಮುಖ್ಯಸ್ಥ ಟಿ.ಟಿ.ವಿ. ದಿನಕರನ್ ಅವರು ಇದು ಶುದ್ಧ ಸುಳ್ಳು ಮತ್ತು ‘ಫೋರ್ಜರಿ’ (Forgery) ಕೆಲಸ ಎಂದು ಆರೋಪಿಸಿದ್ದಾರೆ. ಈ ಕುರಿತು ಅವರು ಈಗಾಗಲೇ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಟಿವಿ ಕೆ ಪಕ್ಷವು ಎಎಂಎಂಕ ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಲು ಸಿದ್ಧತೆ ನಡೆಸಿತ್ತು. ಆದರೆ, ದಿನಕರನ್ ಅವರು ತಮ್ಮ ಪಕ್ಷದ ಶಾಸಕರು ಯಾರೂ ಟಿವಿ ಕೆಗೆ ಬೆಂಬಲ ಘೋಷಿಸಿಲ್ಲ, ಆ ಪತ್ರದಲ್ಲಿರುವುದು ನಕಲಿ ಸಹಿ ಎಂದು ವಾದಿಸುತ್ತಿದ್ದಾರೆ. ಈ ಬೆಳವಣಿಗೆಯಿಂದಾಗಿ ಬಹುಮತ ಸಾಬೀತುಪಡಿಸಲು ಹೊರಟಿದ್ದ ವಿಜಯ್ ಅವರ ಮೈತ್ರಿಕೂಟಕ್ಕೆ ನೈತಿಕ ಸಂಕಷ್ಟ ಎದುರಾಗಿದೆ.
ಈಗಾಗಲೇ ಕಾಂಗ್ರೆಸ್ ಬೆಂಬಲದೊಂದಿಗೆ 113 ಸಂಖ್ಯಾಬಲ ತಲುಪಲು ಯತ್ನಿಸುತ್ತಿದ್ದ ವಿಜಯ್ ಅವರಿಗೆ, ಎಎಂಎಂಕ ಈ ನಡೆ ದೊಡ್ಡ ಹೊಡೆತ ನೀಡಿದೆ. ಪೊಲೀಸರು ಈ ದೂರಿನ ಕುರಿತು ತನಿಖೆ ಆರಂಭಿಸಿದ್ದು, ಒಂದು ವೇಳೆ ಸಹಿ ನಕಲಿ ಎಂದು ಸಾಬೀತಾದರೆ ಟಿವಿ ಕೆ ಪಕ್ಷವು ಕಾನೂನು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ತಮಿಳುನಾಡು ರಾಜಕೀಯ ರಣರಂಗ ಈಗ ಪ್ರತಿ ಕ್ಷಣವೂ ಕುತೂಹಲದ ತಿರುವುಗಳನ್ನು ಪಡೆಯುತ್ತಿದೆ.
ಇದನ್ನು ಓದಿ : Kadaba : ಕೊಲ್ಯದಕಟ್ಟಾ ಅಣೆಕಟ್ಟು ಬಳಿ ಸ್ನಾನಕ್ಕೆ ಹೋದ ಇಬ್ಬರು ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗಿ ಸಾವು

